ADVERTISEMENT

‘ಹಸಿರು ನಡಿಗೆ’ ಪಾದಯಾತ್ರೆ ಆರಂಭ: ಕಾರವಾರದಿಂದ ಮಂಗಳೂರಿನವರೆಗೆ ಕಾಲ್ನಡಿಗೆ ಸಂಚಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:45 IST
Last Updated 28 ಅಕ್ಟೋಬರ್ 2025, 4:45 IST
ಸ್ವಚ್ಛತೆ ಕುರಿತು ಜನಜಾಗೃತಿಗೆ ಮಂಗಳೂರಿನ ನಾಗರಾಜ ಬಜಾಲ ಅವರು ಕಾರವಾರದಲ್ಲಿ ಪಾದಯಾತ್ರೆ ನಡೆಸಿದರು
ಸ್ವಚ್ಛತೆ ಕುರಿತು ಜನಜಾಗೃತಿಗೆ ಮಂಗಳೂರಿನ ನಾಗರಾಜ ಬಜಾಲ ಅವರು ಕಾರವಾರದಲ್ಲಿ ಪಾದಯಾತ್ರೆ ನಡೆಸಿದರು   

ಕಾರವಾರ: ಸಮುದ್ರ ಮಾಲಿನ್ಯ ಮತ್ತು ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವುದರ ವಿರುದ್ಧ ಜನಜಾಗೃತಿ ಮೂಡಿಸಲು ಮಂಗಳೂರಿನ ನಾಗರಾಜ ಬಜಾಲ ನಗರದಿಂದ ಸೋಮವಾರ ಪಾದಯಾತ್ರೆ ಆರಂಭಿಸಿದರು.

‘ಕಾರವಾರದಿಂದ ಮಂಗಳೂರಿನವರೆಗೆ ಸುಮಾರು 310 ಕಿ.ಮೀ ದೂರದವರೆಗೆ ಕಾಲ್ನಡಿಗೆ ಮೂಲಕ ಸ್ವಚ್ಛತೆ ಕುರಿತು ಅರಿವು ಮೂಡಿಸಲು ತೆರಳಿದ್ದೇನೆ. ಮುಂದಿನ 8 ದಿನಗಳ ಕಾಲ ಜಾಥಾ ನಡೆಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ನಾಗರಾಜ ತಿಳಿಸಿದರು.

ಹಸಿರು ದಳ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಮಂಗಳೂರು ವಿಭಾಗದ ಯೋಜನಾ ವ್ಯವಸ್ಥಾಪಕರಾಗಿರುವ ನಾಗರಾಜ ‘ಹಸಿರು ನಡಿಗೆ’ ಹೆಸರಿನಲ್ಲಿ ಏಕಾಂಗಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಚಾಲನೆ ನೀಡಿದರು. ಬಳಿಕ ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್ ವಿಭಾಗಕ್ಕೆ ಭೇಟಿ ನೀಡಿದ ನಾಗರಾಜ ಪಾದಯಾತ್ರೆ ವೇಳೆ ಜನಜಾಗೃತಿಗೆ ಗ್ರಾಮ ಪಂಚಾಯಿತಿಗಳಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.

ADVERTISEMENT

‘ಸಮುದ್ರಕ್ಕೆ ವ್ಯಾಪಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರುತ್ತಿರುವುದು ಬೇಸರ ತಂದಿದೆ. ನದಿಗಳೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಈ ಹಿಂದೆ ಮಂಗಳೂರಿನಲ್ಲಿ ನೇತ್ರಾವತಿ ನದಿ ಕಲುಷಿತಗೊಳ್ಳವುದನ್ನು ತಡೆಯಲು ‘ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಅಭಿಯಾನ ನಡೆಸಿದ್ದೆ. ಅದೇ ಮಾದರಿಯಲ್ಲಿ ಕರಾವಳಿ ಭಾಗದಲ್ಲಿ ಸಮುದ್ರ ಮಾಲಿನ್ಯ ತಡೆಗೆ ಮತ್ತು ಘನ ತ್ಯಾಜ್ಯ ನಿರ್ವಹಣೆಗೆ ಜನರಲ್ಲಿ ಅರಿವು ಮೂಡಿಸಲು ಅಭಿಯಾನ ಸಂಘಟಿಸಿದ್ದೇನೆ’ ಎಂದು ನಾಗರಾಜ ಹೇಳಿದರು.

‘ಪಾದಯಾತ್ರೆ ವೇಳೆ ಧ್ವನಿವರ್ಧಕದ ಮೂಲಕ ಸ್ವಚ್ಛತೆ ಮಹತ್ವದ ಕುರಿತು ಘೊಷಣೆ ಕೂಗುತ್ತ ಸಾಗುತ್ತೇನೆ. ಪರಿಸರ ಶುಚಿಯಾಗಿಟ್ಟುಕೊಳ್ಳುವ ಮಾಹಿತಿಗಳುಳ್ಳ ಕರಪತ್ರವನ್ನೂ ಹಂಚಲಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.