
ಹಳಿಯಾಳ: ಕಾಳಿ ನದಿಯಿಂದ ಹಳಿಯಾಳದ ಕೆರೆ, ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಲ್ಲಿನ ವಿಳಂಬ ವಿರೋಧಿಸಿ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸಂಯೋಗದಲ್ಲಿ ನಡೆಸುತ್ತಿರುವ ನೀರಿಗಾಗಿ ಹೋರಾಟ ಶುಕ್ರವಾರ ಪಟ್ಟಣದ ಮರಾಠ ಭವನದಿಂದ ಆರಂಭಗೊಂಡಿತು.
ಗ್ರಾಮೀಣ ಭಾಗದಲ್ಲಿ ಜನಜಾಗೃತಿ ಮೂಡಿಸುವ ಕುರಿತು ಪಾದಯಾತ್ರೆ ಪ್ರಾರಂಭಿಸಲಾಗಿದ್ದು, ರೈತ ಹಸಿರು ಕ್ರಾಂತಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಬೀದರ ಜಿಲ್ಲೆಯ ರಾಜ್ಯ ರೈತ ಸಂಘಟನೆಯ ಕಾರ್ಯದರ್ಶಿ ಮಹೇಶ ಸುಭೇದಾರ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.
ನೀರಿಗಾಗಿ ಹೋರಾಟ, ನೀರು ಕೊಡಿ ಇಲ್ಲ ಕುರ್ಚಿ ಬಿಡಿ, ನಮ್ಮ ನೀರು ನಮ್ಮ ಹಕ್ಕು ಘೋಷಣೆಯಡಿ ಆರಂಭವಾಗಿರುವ ಈ ಪಾದಯಾತ್ರೆಯು ಮಾರ್ಚ್ 9ರ ವರೆಗೂ ಹತ್ತು ದಿನ ತಾಲ್ಲೂಕಿನ ಬಹುತೇಕ ಹಳ್ಳಿಗಳನ್ನು ಸಂಪರ್ಕಿಸಲಿದೆ.
ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಮಾತನಾಡಿ, ‘ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂದೀಪ ಕುಮಾರ ಬೊಬಾಟಿ, ಪ್ರಮುಖರಾದ ಶಂಕರ ಕಾಜಗಾರ, ಅಶೋಕ ಮೇಟಿ, ಕರ್ನಾಟಕ ರಕ್ಷಣಾ ವೇದಿಕೆಯ ಹಳಿಯಾಳ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಬಂಡಿಗೇರಿಮಠ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಜಿ.ಡಿ. ಗಂಗಾಧರ, ಶರಣ ಸಾಹಿತ್ಯ ಪರಿಷತ್ತಿನ ಶಿವದೇವ ದೇಸಾಯಿಸ್ವಾಮಿ, ನಾರಾಯಣ ಟೋಸುರ, ಚೂಡಪ್ಪ ಬೋಬಾಟಿ ಮೊದಲಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶನಿವಾರ ಪ್ರದಾನಟ್ಟಿ, ಹೊಸುರ, ತತ್ವಣಗಿ, ಅಮ್ಮನಕೊಪ್ಪ, ಜೋಗನಕೊಪ್ಪ, ಎನ್.ಎಸ್.ಕೊಪ್ಪ, ಗೋಲೆಹಳ್ಳಿ, ಮುಂಡವಾಡ, ಮುರ್ಕವಾಡ ಗ್ರಾಮಗಳಲ್ಲಿ ಪಾದಯಾತ್ರೆ ತೆರಳಿ ಮುರ್ಕವಾಡದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಮಾರ್ಚ್ 1ರಂದು ಕೆ.ಕೆ.ಹಳ್ಳಿ, ಜನಗಾ, ನಂದಿಗದ್ದಾ, ಬಸವಳ್ಳಿ, ಸಂಕನಕೊಪ್ಪ, ಬೆಳವಟಗಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆದು. ಬೆಳವಟಗಿಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.