
ಹೊನ್ನಾವರ: ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ತಲತಲಾಂತರಗಳಿಂದ ಸಾಗುವಳಿ ಮಾಡಿಕೊಂಡಿರುವವರ ಪಾಲಿಗೆ ಸರ್ಕಾರ ನಡೆಸುತ್ತಿರುವ ಜಂಟಿ ಸಮೀಕ್ಷೆ ಕಾರ್ಯ ಭರವಸೆ ಮೂಡಿಸಿದ್ದು ಒಂದೆಡೆಯಾದರೆ, ಅರಣ್ಯ ಭೂಮಿಯಲ್ಲಿ ವಾಸವಿರುವುದರ ಖಚಿತತೆಗೆ ಕೆಲವರು ನಕಲಿ ದಾಖಲೆ ಸೃಷ್ಟಿಸುತ್ತಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅಧಿನಿಯಮ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶ ಆಧರಿಸಿ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಅಧಿಕಾರಿಗಳ ತಂಡ ತಾಲ್ಲೂಕಿನ ಅರಣ್ಯ ಅತಿಕ್ರಮಿತ ಜಾಗದ ಸಮೀಕ್ಷಾ ಕಾರ್ಯ ಕೈಗೊಂಡಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ ಹಾಗೂ ಭೂಮಾಪಕರನ್ನೊಳಗೊಂಡ ತಂಡ ಸ್ಥಳ ಮಹಜರು ಮತ್ತು ಪರಿಶೀಲನೆ ನಡೆಸುತ್ತಿದೆ. ಕಂದಾಯ ಹಾಗೂ ಅರಣ್ಯ ಇಲಾಖೆಗಳ ಹಿರಿಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮರು ವಿಚಾರಣೆ ವರದಿಯನ್ನು 2 ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
‘ಅರಣ್ಯ ಭೂಮಿಯಲ್ಲಿ ಸಾಗುವಳಿ ಹಾಗೂ ವಾಸಕ್ಕೆ ಸಂಬಂಧಿಸಿದಂತೆ ಕೆಲವರು ಸೃಷ್ಟಿಸಿರುವ ನಕಲಿ ದಾಖಲೆ ಸೃಷ್ಟಿಸಿರುವ ಶಂಕೆ ಇದೆ. ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಅರಣ್ಯ ಭೂಮಿಯಲ್ಲಿ ದೀರ್ಘ ಅವಧಿಯಿಂದ ವಾಸವಿರುವುದರ ಖಚಿತತೆಗೆ ಮೂರು ತಲೆಮಾರಿನ ದಾಖಲೆ, ಜಾಗದ ಜಿಪಿಎಸ್ ಮಾಡಿರುವ ದಾಖಲೆಗಳನ್ನು ಸಲ್ಲಿಸಬೇಕು. ಆದರೆ, ಕೆಲವರು ಈ ದಾಖಲೆಗಳನ್ನು ನಕಲಿಯಾಗಿ ಸಿದ್ಧಪಡಿಸಿ ನೀಡುತ್ತಿರುವ ದೂರುಗಳಿವೆ. ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳ ಕೂಲಂಕಷ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಅರ್ಜಿದಾರರ ಕುಟುಂಬಕ್ಕಿರುವ ಕಂದಾಯ ಭೂಮಿ, ಇತರ ಆದಾಯ ಮೂಲಗಳು ಮೊದಲಾದವುಗಳನ್ನು ಸಮೀಕ್ಷೆಯ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತಿದೆ. ನೈಜ ಅತಿಕ್ರಮಣದಾರರನ್ನು ಗುರುತಿಸುವ ಕಾರ್ಯ ಕೈಗೊಳ್ಳಲಾಗಿದ್ದು ಒಂದೇ ಕುಟುಂಬದ ಹಲವರ ಹೆಸರಲ್ಲಿ ಮಂಜೂರಿಗೆ ಅರ್ಜಿ ನೀಡಿರುವ, ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡವರ ಪತ್ತೆಯೂ ನಡೆಯಲಿದೆ. ನಕಲಿ ದಾಖಲೆ ಒದಗಿಸುತ್ತಿರುವವರನ್ನೂ ಪತ್ತೆ ಹಚ್ಚಿ, ಕ್ರಮ ಜರುಗಿಸಲಾಗುತ್ತದೆ’ ಎಂದೂ ತಿಳಿಸಿದರು.
‘ಮಂಜೂರಿ ಮಾನದಂಡ ಪೂರೈಸಲು ಸಾಧ್ಯವಾಗದ ಹಾಗೂ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡಿರುವ ಕೆಲವರು ಸಮೀಕ್ಷೆ ನಡೆಯದಂತೆ ಕೆಲ ಸಂಘಟನೆಗಳ ಮೂಲಕ ಒತ್ತಡ ಹೇರುತ್ತಿದ್ದಾರೆ. ಇದರಿಂದ ಅರ್ಹರಿಗೆ ತೊಂದರೆಯಾಗುತ್ತಿದೆ’ ಎಂದು ಅರ್ಜಿದಾರ ವೆಂಕಟ್ರಮಣ ನಾಯ್ಕ ದೂರಿದರು.
ಅರಣ್ಯ ಭೂಮಿ ಸಮೀಕ್ಷೆ ಕಾರ್ಯ ನಡೆದಿದ್ದು ಸಮೀಕ್ಷೆಯನ್ನು ಶೀಘ್ರ ಪೂರೈಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು
-ಪ್ರವೀಣ ಕರಾಂಡೆ ತಹಶೀಲ್ದಾರ್
4 ಸಾವಿರ ಅರ್ಜಿ ಸಮೀಕ್ಷೆ ಬಾಕಿ ಹೊನ್ನಾವರ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 10027 ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಗೆ ಸಮಾಜ ಕಲ್ಯಾಣ ಇಲಾಖೆ ಪಟ್ಟಿ ಸಿದ್ಧಪಡಿಸಿದೆ. ಅವುಗಳ ಪೈಕಿ ಇನ್ನೂ 4000 ಅರ್ಜಿಗಳ ಸಮೀಕ್ಷೆ ಕಾರ್ಯ ಬಾಕಿ ಇದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.