ಅಪಘಾತ
–ಪ್ರಾತಿನಿಧಿಕ ಚಿತ್ರ
ಯಲ್ಲಾಪುರ: ತಾಲ್ಲೂಕಿನ ಹುಬ್ಬಳ್ಳಿ – ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಹಿಟ್ಟಿನಬೈಲ್ ಸಮೀಪ ಶುಕ್ರವಾರ ರಾತ್ರಿ ಬಸ್ ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು 3 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 7 ಜನ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ನೀಲವ್ವಾ ಯಲದುರ್ಗಪ್ಪ ಹರದೊಳ್ಳಿ (40), ಜಾಲಿಹಾಳದ ಗಿರಿಜವ್ವ ಅಯ್ಯಪ್ಪ ಬೂದನ್ನವರ್ (30) ಮೃತರು. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
ಅಮೀನಗಡದ ಚಿದಾನಂದ ಕಿತ್ತಳಿ, ಮಲ್ಲಪ್ಪ ಯಮನಪ್ಪ ಕತ್ತಿ, ಮಂಜುಳಾ ಗಾಳೆಪ್ಪ ಹಳಬರ್, ಮಲ್ಲಿಕಾರ್ಜುನ ಪಕೀರಪ್ಪ ಅಂದಲಿ, ದೇವಕಿ ಹನುಮಂತ ಬೆಳ್ಳಿ, ಬಾದಾಮಿಯ ಸಮೀರಾ ಬೇಗಂ, ಹುನಗುಂದದ ಷರೀಪಾ ಬೇಗಂ ಗಾಯಗೊಂಡಿದ್ದಾರೆ.
ಬಸ್ ಚಾಲಕ ಯಮನಪ್ಪ ಮುತ್ತಪ್ಪ ಮಾಗಿ ಹಾಗೂ ಲಾರಿ ಚಾಲಕನ ವಿರುದ್ಧ ಅಮ್ಮಿನಗಡದ ರಮೇಶ ಚಂದಪ್ಪ ಕಿತ್ತಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಸ್ ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಪ್ರಯಾಣಿಸುತ್ತಿತ್ತು. ಹಿಟ್ಟಿನಬೈಲ್ ಸಮೀಪ ಇಂಡಿಕೇಟರ್ ಹಾಕದೆ ನಿಲ್ಲಿಸಲಾಗಿದ್ದ ಲಾರಿಗೆ ಡಿಕ್ಕಿಹೊಡೆಯಿತು. ಮೃತರು ಮತ್ತು ಗಾಯಾಳುಗಳಲ್ಲಿ ಹೆಚ್ಚಿನವರು ಧರ್ಮಸ್ಥಳಕ್ಕೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.