
ಕಾರವಾರ: ‘ಕದಂಬ ನೌಕಾನೆಲೆಯ ವಿಸ್ತರಣೆ ಕಾಮಗಾರಿ ಸೇರಿ ಇಲ್ಲಿ ಕಾರ್ಯನಿರ್ವಹಿಸಲು ಬರುವ ಎಲ್ಲ ಕಾರ್ಮಿಕರ ಹಿನ್ನೆಲೆಯನ್ನು ಹಲವು ಬಾರಿ ಪರಿಶೀಲಿಸಲಾಗುತ್ತದೆ’ ಎಂದು ಕರ್ನಾಟಕ ನೌಕಾನೆಲೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಹೇಳಿದರು.
ಕದಂಬ ನೌಕಾನೆಲೆಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹೊರ ರಾಜ್ಯದ ಕಾರ್ಮಿಕರಿದ್ದರೆ, ಅವರ ಆಧಾರ್ ಕಾರ್ಡ್ ಜೊತೆಗೆ ಕೌಟುಂಬಿಕ ಹಿನ್ನೆಲೆ ಸೇರಿ ಇತರ ಮಾಹಿತಿಯನ್ನು ಪೊಲೀಸ್ ಮತ್ತು ಗುಪ್ತಚರ ವ್ಯವಸ್ಥೆ ಮೂಲಕ ಸಂಗ್ರಹಿಸುತ್ತೇವೆ. ಇದರ ನಂತರವಷ್ಟೇ ಕೆಲಸಕ್ಕೆ ನಿಯೋಜಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ’ ಎಂದರು.
'ನೌಕಾದಳದ ಯಾವುದೇ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಅಥವಾ ಸ್ನೇಹಿತರು, ಪರಿಚಯಸ್ಥರೊಂದಿಗೆ ಹಂಚಿಕೊಳ್ಳದಂತೆ ಸಿಬ್ಬಂದಿಗೂ ಎಚ್ಚರಿಕೆ ನೀಡಲಾಗಿದೆ. ನೌಕಾನೆಲೆ ವ್ಯಾಪ್ತಿಯೊಳಗೆ ಮೀನುಗಾರಿಕೆಗೆ ಅವಕಾಶ ನೀಡದಂತೆ ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.