ಶಿರಸಿ: ‘ದೇಶದಲ್ಲಿ ಸುರಕ್ಷತೆ, ಶಾಂತಿ ನೆಲೆಸಲು ಗಡಿಯಲ್ಲಿ ರಕ್ಷಣೆಗೆ ನಿಂತ ಸೈನಿಕರ ಪರಿಶ್ರಮ ಕಾರಣ. ಯುವಕರು ಸೆಲೆಬ್ರಿಟಿಗಳ ಬದಲು ಸೈನಿಕರನ್ನು ಮಾದರಿಯಾಗಿಸಿಕೊಳ್ಳಬೇಕು’ ಎಂದು ವೈದ್ಯ ಡಾ.ರವಿಕಿರಣ ಪಟವರ್ಧನ್ ಹೇಳಿದರು.
ಇಲ್ಲಿನ ಮಾರಿಕಾಂಬಾ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಿವೃತ್ತ ಸೈನಿಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವ್ಯಾಸಿ ಅಂಚೆಚೀಟಿ ಸಂಗ್ರಹಾಕಾರ ನರಸಿಂಹಮೂರ್ತಿ, ‘ಶಿಸ್ತಿಗೆ ಭಾರತೀಯ ಸೈನ್ಯ ಹೆಸರಾಗಿದೆ. ಯುವಕರು ಸೈನ್ಯದ ಶಿಸ್ತು, ದೃಢತೆಯಿಂದ ಸ್ಪೂರ್ತಿ ಪಡೆಯಬೇಕು’ ಎಂದರು.
ಕಾಲೇಜಿನ ಪ್ರಾಚಾರ್ಯ ಬಾಲಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಗಿಲ್ ಯುದ್ಧ ಭೂಮಿಯ ಚಿತ್ರಣ, ಯುದ್ಧಾನಂತರದ ಪರಿಸ್ಥಿತಿಗಳ ಕುರಿತು ದೃಶ್ಯಗಳನ್ನು ಪ್ರದರ್ಶಿಸಲಾಯಿತು.
ನಿವೃತ್ತ ಸೈನಿಕರ ಸಂಘದ ಸುಭೇದಾರ್ ರಾಮು, ವಿ.ಎಸ್.ಹೆಗಡೆ, ಶ್ರೀಪಾದ ಹೆಗಡೆ, ಗಣಪತಿ ಭಟ್, ನದಾಫ್, ಇದ್ದರು.
ಸ್ಮಾರಕಕ್ಕೆ ಗೌರವ ಸಲ್ಲಿಕೆ:
ನಿವೃತ್ತ ಸೈನಿಕರ ಸಂಘದ ವತಿಯಿಂದ ಮರಾಠಿಕೊಪ್ಪದ ವಿಶಾಲ ನಗರದ ಉದ್ಯಾನದಲ್ಲಿರುವ ಅಮರ ಜವಾನ್ ಸ್ಮಾರಕಕ್ಕೆ ಗೌರವ ಅರ್ಪಣೆ ಸಲ್ಲಿಸಲಾಯಿತು. ಶಿಶು ಅಭಿವೃದ್ಧಿ ಅಧಿಕಾರಿಯೂ ಆಗಿರುವ ನಿವೃತ್ತ ಸೈನಿಕ ದತ್ತಾತ್ರೇಯ ಭಟ್, ಜಿ.ವಿ.ಹೆಗಡೆ, ವಿನಾಯಕ ಧೀರನ್, ಇತರರು ಇದ್ದರು.
ಬಿಜೆಪಿ ಯುವಮೋರ್ಚಾ ಶಿರಸಿ ನಗರ ಘಟಕದ ವತಿಯಿಂದಲೂ ಪುಷ್ಪನಮನ ಸಲ್ಲಿಸಲಾಯಿತು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸದಸ್ಯ ನಾಗರಾಜ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.