ಭಟ್ಕಳ: ತಾಲ್ಲೂಕಿನಲ್ಲಿ ಬುಧವಾರ ಬೆಳಿಗ್ಗೆಯಿಂದ ಸುರಿದ ಭಾರಿ ಮಳೆ ಗಾಳಿಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಳಿಗ್ಗೆ ಸುರಿದ ಭಾರಿ ಮಳೆಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸಂಶುದ್ದೀನ್ ವೃತ್ತ ಸಂಪೂರ್ಣ ಜಲಾವೃತಗೊಂಡು ಕೆರೆಯಾಗಿ ಮಾರ್ಪಟ್ಟಿತು. ಮಂಗಳವಾರವಷ್ಟೇ ಐ.ಆರ್.ಬಿಯಿಂದ ಸಂಶುದ್ದೀನ್ ವೃತ್ತದ ಬಳಿ ಮಣ್ಣಿನಿಂದ ತುಂಬಿದ್ದ ಗಟಾರವನ್ನು ಸ್ವಚ್ಛಗೊಳಿಸಿ ನೀರು ಸುಗಮವಾಗಿ ಹರಿದುಹೋಗುವಂತೆ ಮಾಡಿದ್ದರು. ಆದರೆ ಬುಧವಾರ ಸುರಿದ ಮಳೆಗೆ ಮತ್ತೆ ಈ ವೃತ್ತ ಕೆರೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಪರಿಹಾರ ಎಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ತಾಲ್ಲೂಕಿನಲ್ಲಿ ಗುಡುಗು ಸಹಿತ ಭಾರಿ ಮಳೆ ಮುಂದುವರಿದಿದ್ದು, ಗುಡ್ಡದಂಚಿನ ಮನೆಗಳ ನಿವಾಸಿಗಳಿಗೆ ಹಾಗೂ ನದಿಯಂಚಿನ ನಿವಾಸಿಗಳಿಗೆ ಜಾಗೃತೆಯಿಂದ ಇರಲು ಸೂಚನೆ ನೀಡಲಾಗಿದೆ. ಮೀನುಗಾರರಿಗೆ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುನ್ನೇಚ್ಚರಿಕೆ ಕ್ರಮವಾಗಿ ತಾಲ್ಲೂಕಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.