
ಕಾರವಾರ: ಭಟ್ಕಳ ಪಟ್ಟಣದಲ್ಲಿ ನಿಯಮ ಮೀರಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಖಾಸಗಿ ವಾಹನಗಳು, ಆಟೊಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಭಟ್ಕಳ ಘಟಕದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
‘ಆಟೊಗಳು ನಿಯಮಾವಳಿ ಉಲ್ಲಂಘಿಸಿ ನೂರಾರು ಕಿ.ಮೀ ದೂರದವರೆಗೆ ಸಾಗುತ್ತಿವೆ. ಜಿಲ್ಲೆಯ ಗಡಿ ದಾಟಿ ನೆರೆಯ ಜಿಲ್ಲೆಗಳಿಗೂ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. 200ಕ್ಕೂ ಹೆಚ್ಚು ಖಾಸಗಿ ವಾಹನಗಳು ಬಾಡಿಗೆ ಆಧಾರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಬಳಕೆ ಆಗುತ್ತಿದೆ’ ಎಂದು ದೂರು ನೀಡಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಭಟ್ಕಳ ಘಟಕದ ಅಧ್ಯಕ್ಷ ಗಣೇಶ ದೇವಾಡಿಗ, ‘ಟ್ಯಾಕ್ಸಿ ಚಾಲಕರಿಗೆ ಪಟ್ಟಣದಲ್ಲಿ ಸರಿಯಾದ ನಿಲ್ದಾಣವೂ ಇಲ್ಲದಂತೆ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಲುವಾಗಿ ಭಟ್ಕಳ ಪಟ್ಟಣದಲ್ಲಿ ಐಆರ್ಬಿ ಕಂಪನಿ ಅಧಿಕಾರಿಗಳು ಟ್ಯಾಕ್ಸಿಗಳ ಸ್ಥಳಾಂತರಕ್ಕೆ ಏಕಾಏಕಿ ಸೂಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಜಗದೀಶ ನಾಯ್ಕ, ‘ಆಟೊಗಳ ಸಂಚಾರ ಮಿತಿ 7 ಕಿ.ಮೀ ಮಾತ್ರವೇ ಇದ್ದರೂ ಕೆಲವೊಂದು ಆಟೊಗಳು ಕುಂದಾಪುರ, ಉಡುಪಿ ಸೇರಿದಂತೆ ದೂರದ ಊರುಗಳಿಗೂ ಸಂಚರಿಸುತ್ತಿವೆ. ಖಾಸಗಿ ಜನರಿಗೆ ಖಾಸಗಿ ವಾಹನಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ. ಹೊರರಾಜ್ಯದ ನೋಂದಣಿ ವಾಹನಗಳ ಓಡಾಟ ಪಟ್ಟಣ ವ್ಯಾಪತಿಯಲ್ಲಿ ಹೆಚ್ಚುತ್ತಿದೆ. ಜೊತೆಗೆ ಅನ್ಯರಾಜ್ಯಗಳ ನೋಂದಣಿ ಸಂಖ್ಯೆ ಹೊಂದಿರುವ ಖಾಸಗಿ ಬಸ್ಗಳ ಸಂಚಾರವೂ ಅಧಿಕವಾಗಿದೆ’ ಎಂದು ದೂರಿದರು.
ಮಹಮ್ಮದ್ ಮುಸ್ತಾಕ್, ಫೈಜಲ್, ರಮೇಶ ನಾಯ್ಕ, ಮೊಹಮ್ಮದ್ ಅದ್ನಾನ್, ಶ್ರೀನಿವಾಸ ನಾಯ್ಕ, ಗಜಾನನ ದೇವಾಡಿಗ, ರಾಘು ಶೇಟ್, ಮಹಮ್ಮದ್ ಸಲೀಂ, ಅಬ್ದುಲ್ ಬಾರಿ, ಮಹಮ್ಮದ್ ಸಲ್ಮಾನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.