
ಕಾರವಾರ: ಗ್ರಾಹಕರ ಠೇವಣಿ ವಂಚಿಸಿರುವ ಸಮೃದ್ಧ ಜೀವನ ಮಲ್ಟಿಪರ್ಪಸ್ ಸಹಕಾರ ಸೊಸೈಟಿಯಿಂದ ಜನರಿಗೆ ಬರಬೇಕಿರುವ ಠೇವಣಿ ಮರಳಿಸಿಕೊಡಲು ಒತ್ತಾಯಿಸಿ ಠೇವಣಿ ವಂಚಿತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜನಸಂಘರ್ಷ ಫೌಂಡೇಶನ್ ಸಮಿತಿ, ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಮತ್ತು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಘಟಕದ ನೇತೃತ್ವದೊಂದಿಗೆ ಹತ್ತಾರು ಠೇವಣಿದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
‘ದೇಶದ 22 ರಾಜ್ಯಗಳಲ್ಲಿ ಶಾಖೆ ತೆರೆದಿದ್ದ ಮಹಾರಾಷ್ಟ್ರ ಮೂಲದ ಸೊಸೈಟಿಯು 14 ಲಕ್ಷಕ್ಕೂ ಹೆಚ್ಚು ಗ್ರಾಹಕರ ಠೇವಣಿ ಮರಳಿಸಬೇಕಿದೆ. ಜಿಲ್ಲೆಯಲ್ಲಿಯೂ ಸಾವಿರಾರು ಕುಟುಂಬಗಳು ಹಣ ಕಳೆದುಕೊಂಡು ಹಲವು ವರ್ಷದಿಂದ ಅತಂತ್ರರಾಗಿದ್ದಾರೆ’ ಎಂದು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ ಶೆಟ್ಟಿ ಆರೋಪಿಸಿದರು.
‘ಸಂಸ್ಥೆಯಿಂದ ಜನರಿಗೆ ಬರಬೇಕಾದ ಠೇವಣಿ ಮೊತ್ತ ಮರಳಿಸಿಕೊಡಲು ರಾಜ್ಯ ಸರ್ಕಾರವು ಪ್ರಯತ್ನ ನಡೆಸಬೇಕು. ಹಣ ಕಳೆದುಕೊಂಡವರಲ್ಲಿ ಬಹುತೇಕರು ಬಡವರು, ಕೂಲಿ ಕಾರ್ಮಿಕರಾಗಿದ್ದು, ಅವರಿಗೆ ವಂಚಿಸಿದ ಆರೋಪಿಗಳು ಕಠಿಣ ಶಿಕ್ಷೆಗೆ ಗುರಿಯಾಗಬೇಕು’ ಎಂದು ಒತ್ತಾಯಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಪ್ರಮುಖರಾದ ಕೆ.ನಿಂಗಪ್ಪ, ಎಸ್.ಪಿ.ಬಳ್ಳಾರಿ, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.