
ಕಾರವಾರ: ಇಲ್ಲಿನ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ಬಂದಿದ್ದು, ನ್ಯಾಯಾಲಯದಲ್ಲಿ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ಕೈಗೊಂಡಿತು.
ನ್ಯಾಯಾಲಯ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಇಟ್ಟಿರುವ ಬೆದರಿಕೆಯ ಸಂದೇಶ ಬಂದಿತ್ತು. ನ್ಯಾಯಾಲಯದ ಕಲಾಪ ಆರಂಭಕ್ಕೆ ಮುನ್ನವೇ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಪರಿಶೀಲನೆ ಕೈಗೊಂಡರು. ನ್ಯಾಯಾಲಯದ ಒಳಗೆ, ಹೊರ ಆವರಣ, ವಾಹನ ನಿಲುಗಡೆ ತಾಣಗಳಲ್ಲಿ ಪರಿಶೀಲನೆ ನಡೆಸಿದರು. ನ್ಯಾಯಾಲಯ ಪ್ರವೇಶಿಸುವ ಮುನ್ನ ವಕೀಲರು, ಸಾರ್ವಜನಿಕರನ್ನು ಕೂಲಂಕಷವಾಗಿ ತಪಾಸಿಸಿ ಒಳಬಿಡಲಾಯಿತು.
ತಾಸಿಗೂ ಹೆಚ್ಚು ಕಾಲ ತಂಡವು ನ್ಯಾಯಾಲಯದಲ್ಲಿ ಬೀಡುಬಿಟ್ಟು ಪರಿಶೀಲನೆ ಕೈಗೊಂಡಿತು. ಆ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಬಂದು ಹೋಗುವವರ ಮೇಲೆ ನಿಗಾ ಇರಿಸಿದ್ದರು.
‘ಅಪರಿಚಿತರಿಂದ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ತಪಾಸಣೆ ನಡೆಸಲಾಗಿದೆ. ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೂ, ನಿಗಾ ಇರಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.