
ಕಾರವಾರ: ‘ಸಾರಿಗೆ ಇಲಾಖೆಯ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದೆ, ಸಾರ್ವಜನಿಕರಿಗೆ ಸ್ಪಂದಿಸದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಜಾನ್ ಮಿಸ್ಕತ್ ಅವರನ್ನು ವರ್ಗಾವಣೆಗೊಳಿಸಬೇಕು’ ಎಂದು ಲಾರಿ ಮಾಲೀಕರ ಸಂಘವು ಸಾರಿಗೆ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ ಅವರಿಗೆ ಒತ್ತಾಯಿಸಿದೆ.
ಇಲಾಖೆ ಪ್ರಗತಿ ಪರಿಶೀಲನೆಗೆ ಸೋಮವಾರ ಇಲ್ಲಿನ ಆರ್ಟಿಒ ಕಚೇರಿಗೆ ಅವರು ಭೇಟಿ ನೀಡಿದ ವೇಳೆ ಆರ್ಟಿಒ ವಿರುದ್ಧ ಲಾರಿ ಮಾಲೀಕರ ಸಂಘದವರು ದೂರು ಸಲ್ಲಿಸಿದರು.
‘ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಗೋವಾ ಗಡಿ ಪ್ರದೇಶದ ಸಮೀಪದಲ್ಲಿರುವ ಕಚೇರಿಯಲ್ಲಿ ಇಲಾಖೆಯ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ವಾಹನಗಳ ದಾಖಲೆ ಪತ್ರಗಳು ಕಣ್ಮರೆಯಾಗಿವೆ. ಕೆಲಸದ ಅಂಗವಾಗಿ ವಾಹನ ಮಾಲೀಕರು ಕಚೇರಿಗೆ ಬಂದ ವೇಳೆ ಕಡತಗಳು ಕಾಣೆಯಾಗಿದ್ದಾಗಿ ಸಿಬ್ಬಂದಿ ಹೇಳುತ್ತಿದ್ದಾರೆ. ಕಡತಗಳು ಕಾಣೆಯಾಗಿದ್ದರೂ ಈವರೆಗೆ ಕಚೇರಿಯಿಂದ ಪೊಲೀಸರಿಗೆ ದೂರು ಸಲ್ಲಿಕೆಯಾಗಿಲ್ಲ’ ಎಂದು ಆರೋಪಿಸಿದರು.
‘ದಾಖಲೆ ಪತ್ರಗಳ ಕಡತಗಳು ಕಣ್ಮರೆಯಾಗಿರುವ ಬಗ್ಗೆ ಕ್ರಮಕ್ಕೆ ಆರ್ಟಿಒ ಅವರಿಗೆ ಕೆಲ ದಿನದ ಹಿಂದೆಯೇ ಒತ್ತಾಯಿಸಲಾಗಿತ್ತು. ಆದರೂ ಅವರು ಕ್ರಮವಹಿಸದೆ ನಿರ್ಲಕ್ಷಿಸಿದ್ದಾರೆ’ ಎಂದು ದೂರಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾಧವ ನಾಯಕ, ಲಾರಿ ಮಾಲಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಗಿರೀಶ ಮಲೆನಾಡ, ಸುಜಯ್ ಮರಾಠಿ, ನಾಗೇಂದ್ರ ಭಟ್, ಮುರಳಿ ಲಾವಲ್, ಕಿಶೋರ ನಾಯ್ಕ, ಅರುಣ ತಳೇಕರ, ನಿತ್ಯಾನಂದ ನಾಯ್ಕ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.