ADVERTISEMENT

ಹೂವಿನಲ್ಲರಳಿದ ಕ್ರಾಂತಿ ‘ಕೆಂಪು ಕಣಗಿಲೆ’

‘ನಟನ’ ತಂಡದ ಕಲಾವಿದರಿಂದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 11:24 IST
Last Updated 5 ಫೆಬ್ರುವರಿ 2020, 11:24 IST
ಶಿರಸಿಯಲ್ಲಿ ಪ್ರದರ್ಶನಗೊಂಡ ‘ಕೆಂಪು ಕಣಗಿಲೆ’ ನಾಟಕದ ದೃಶ್ಯ
ಶಿರಸಿಯಲ್ಲಿ ಪ್ರದರ್ಶನಗೊಂಡ ‘ಕೆಂಪು ಕಣಗಿಲೆ’ ನಾಟಕದ ದೃಶ್ಯ   

ಶಿರಸಿ: ಅದಮ್ಯ ಚೈತನ್ಯದ ಸೆಲೆ, ಹೂ ಮನದ ‘ನಂದಿನಿ’ ತಣ್ಣಗೆ ಬೆಳೆಸಿದ ಕ್ರಾಂತಿಯ ಕಿಚ್ಚು, ಶ್ರಮಿಕ ವರ್ಗದವರಲ್ಲಿ ಬೆಳೆಸಿದ ಸ್ವಾಭಿಮಾನ, ‍ಪ್ರಭುವಿನ ದುರಾಸೆಯ ಹುಚ್ಚು ಬಿಡಿಸಿದ ಆಕೆಯ ಸಾಹಸದ ಕಥಾ ಹಂದರವನ್ನೊಳಗೊಂಡ ‘ಕೆಂಪು ಕಣಗಿಲೆ’ ನಾಟಕ ಪ್ರೇಕ್ಷಕರ ಮನಗೆದ್ದಿತು.

ಶಿರಸಿ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶು ಆರೈಕೆ ಘಟಕದ ಉನ್ನತೀಕರಣ, ಹಿರಿಯ ನಾಗರಿಕರ ವ್ಯಾಯಾಮ ಕೇಂದ್ರ, ಸ್ತನ್ಯಪಾನ ಕೇಂದ್ರ ಆರಂಭ ಈ ಮೂರು ಪ್ರಮುಖ ಯೋಜನೆಗಳಿಗೆ ದೇಣಿಗೆ ಸಂಗ್ರಹಿಸಲು ಇಲ್ಲಿನ ರೋಟರಿ ಕ್ಲಬ್ ಹಾಗೂ ಭಾರತೀಯ ವೈದ್ಯಕೀಯ ಸಂಘದ ಘಟಕ ಜಂಟಿಯಾಗಿ ಇತ್ತೀಚೆಗೆ ಇಲ್ಲಿ ಈ ನಾಟಕ ಪ್ರದರ್ಶನ ಆಯೋಜಿಸಿದ್ದವು.

ರವೀಂದ್ರನಾಥ ಠಾಗೋರ್ ಅವರ ನಾಟಕಕ್ಕೆ ಸುಧಾ ಆಡುಕಳ ರಂಗರೂಪ ನೀಡಿದ್ದರು. ರಂಗಕರ್ಮಿ ಡಾ.ಶ್ರೀಪಾದ ಭಟ್ಟ ನಿರ್ದೇಶಿಸಿದ್ದ ನಾಟಕವನ್ನು ಮಂಡ್ಯ ರಮೇಶ ನೇತೃತ್ವದ ಮೈಸೂರಿನ ‘ನಟನ’ ತಂಡದ ಸದಸ್ಯರು ಅಭಿನಯಿಸಿದರು. ನಾಟಕದ ಮುಖ್ಯ ಪಾತ್ರಧಾರಿ ‘ನಂದಿನಿ’ಯಾಗಿ ಮಂಡ್ಯ ರಮೇಶ ಪುತ್ರಿ ದಿಶಾ ರಮೇಶ ಹಾಗೂ ಇಡೀ ತಂಡದ ಸದಸ್ಯರು ಮನೋಜ್ಞವಾಗಿ ಅಭಿನಯಿಸಿದರು.

ADVERTISEMENT

ಪಶ್ಚಿಮ ಬಂಗಾಳದಲ್ಲಿ ನಡೆದ ಕ್ರಾಂತಿಯ ಕಾಲವನ್ನು ಆಧರಿಸಿದ್ದ ಈ ನಾಟಕ, ಶುರುವಿನಲ್ಲಿ ಪ‍್ರೇಕ್ಷಕರಿಗೆ ತುಸು ಕ್ಲಿಷ್ಟವಾಗಿ ಕಂಡಿತು. ಸಂಭಾಷಣೆಯನ್ನು ಗ್ರಹಿಸುತ್ತ ಹೋದ ಹಾಗೆ, ಅದರೊಳಗಿನ ರೂಪಕಗಳು, ಸಂಕೇತಗಳು ಚಿಂತನೆಯ ಪದರವನ್ನು ತೆರೆದಿಟ್ಟವು. ಒಂದು ತಾಸಿನ ನಾಟಕ ಒಂದಿಡೀದಿನ ಮನಸ್ಸನ್ನು ಆವರಿಸಿತ್ತು.

ಮಂಡ್ಯ ರಮೇಶ ಹಾಗೂ ಶ್ರೀಪಾದ ಭಟ್ಟ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಡಾ.ಶಿವರಾಮ ಕೆ.ವಿ ಸ್ವಾಗತಿಸಿದರು. ಅನಂತ ಪದ್ಮನಾಭ ಪರಿಚಯಿಸಿದರು. ಪಾಂಡುರಂಗ ಪೈ ನಿರೂಪಿಸಿದರು. ಐಎಂಎ ಘಟಕದ ಅಧ್ಯಕ್ಷ ಡಾ. ರಾಘವೇಂದ್ರ ಉಡುಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.