ಹೊನ್ನಾವರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರಶಸ್ತಿಯನ್ನು ಘೋಷಿಸಿದೆ. ಗೌರವ ಪ್ರಶಸ್ತಿಯು ₹ 50 ಸಾವಿರ ನಗದು ಮತ್ತು ಪುಸ್ತಕ ಪುರಸ್ಕಾರ ₹ 25 ಸಾವಿರ ನಗದು ಒಳಗೊಂಡಿದೆ.
‘ಮಂಗಳೂರಿನ ಮಾರ್ಸೆಲ್ ಎಂ.ಡಿಸೋಜ ಅವರನ್ನು ‘ಕೊಂಕಣಿ ಸಾಹಿತ್ಯ’, ಮುಂಬೈನ ಹ್ಯಾರಿ ಫರ್ನಾಂಡಿಸ್ ಅವರನ್ನು ‘ಕೊಂಕಣಿ ಕಲೆ’ ಮತ್ತು ಹೊನ್ನಾವರದ ಅಶೋಕ ದಾಮು ಕಾಸರಕೋಡ ಅವರನ್ನು ‘ಕೊಂಕಣಿ ಜಾನಪದ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬಂಟ್ವಾಳದ ಮೇರಿ ಸಲೋಮಿ ಡಿಸೋಜ ಅವರ ಕವನ ‘ಅಟ್ವೊ ಸುರ್’, ಫಾದರ್ ರೊಯ್ಸನ್ ಫರ್ನಾಂಡಿಸ್ ಹಿರ್ಗಾನ್ ಅವರ ಸಣ್ಣಕತೆ ‘ಪಯ್ಲಿ ಭೆಟ್’ ಹಾಗೂ ಮಂಗಳೂರಿನ ಸ್ಟೀಫನ್ ಮಸ್ಕರೇನಸ್ (ಹೇಮಾಚಾರ್ಯ) ಅವರ ಕೊಂಕಣಿ ಭಾಷಾಂತರ ಕೃತಿ ‘ಎಕ್ಸೊ ಎಕ್ಸುರೊ’ ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ’ ಎಂದು ತಿಳಿಸಿದರು.
‘ನವೆಂಬರ್ 10ರಂದು ಇಲ್ಲಿನ ಕಾಸರಕೋಡ ಶಾನಭಾಗ ರೆಸಿಡೆನ್ಸಿ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಪ್ರಶಸ್ತಿ ಪ್ರದಾನ ಮಾಡುವರು’ ಎಂದರು. ಅಕಾಡೆಮಿ ಸದಸ್ಯರಾದ ನವೀನ್ ಕೆನ್ಯುಟ್ ಲೋಬೊ, ಜೇಮ್ಸ್ ಪೆದ್ರು ಲೋಪಿಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.