ADVERTISEMENT

ಕಾರವಾರ | ಮಣ್ಣು ತೆರವು; ಕೆಪಿಸಿ ಜವಾಬ್ದಾರಿ: ಜಿಲ್ಲಾಧಿಕಾರಿ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ: ಜಿಲ್ಲಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 6:21 IST
Last Updated 16 ಜುಲೈ 2025, 6:21 IST
ಕೆ.ಲಕ್ಷ್ಮಿಪ್ರಿಯಾ
ಕೆ.ಲಕ್ಷ್ಮಿಪ್ರಿಯಾ   

ಕಾರವಾರ: ‘ಕೊಡಸಳ್ಳಿ ಅಣೆಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಬಿದ್ದ ಮಣ್ಣಿನ ರಾಶಿಯನ್ನು, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ (ಜಿಎಸ್‌ಐ) ತಜ್ಞರ ಸಲಹೆ ಪಡೆದು ಕರ್ನಾಟಕ ವಿದ್ಯುತ್ ನಿಗಮದಿಂದಲೇ (ಕೆಪಿಸಿ) ತೆರವುಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ, ‘ವಿದ್ಯುದಾಗಾರಕ್ಕೆ ಇಂಧನ ಸಾಗಿಸಲು ತೊಂದರೆಯಾಗುತ್ತಿದ್ದು, ಮಣ್ಣು ತೆರವು ಮಾಡಿಕೊಡಬೇಕು’ ಎಂಬ ಕೆಪಿಸಿ ಅಧಿಕಾರಿಗಳ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದರು.

‘ಭೂಕುಸಿತದಿಂದ ಬಾಧಿತವಾಗಿರುವ ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸೂಕ್ತ ಜಾಗ ಗುರುತಿಸಿ, ವರದಿ ಸಲ್ಲಿಸಿ’ ಎಂದು ಶಿರಸಿ ಉಪವಿಭಾಗಾಧಿಕಾರಿಗೆ ಸೂಚಿಸಿದರು.

ADVERTISEMENT

‘2021ರಲ್ಲಿ ಕುಸಿತ ದುರಂತ ಸಂಭವಿಸಿದೆ. ಇನ್ನೂ ಪುನರ್ವಸತಿಗೆ ಪರ್ಯಾಯ ಜಾಗ ಗುರುತು ಮಾಡಲಾಗಿಲ್ಲ. ಆದಷ್ಟು ಶೀಘ್ರದಲ್ಲಿ ಪರ್ಯಾಯ ಜಾಗ ಗುರುತಿಸಿ, ಅಲ್ಲಿನ ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸುವ ಅಗತ್ಯವಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಡಿಸಿಎಫ್‌ಗಳಾದ ಸಿ. ರವಿಶಂಕರ್, ಯೋಗೇಶ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಇದ್ದರು. 

ಕಳಚೆ ಪ್ರದೇಶದಲ್ಲಿ ಭೂ ಕುಸಿತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಕುರಿರು ಅಧಿಕಾರಿಗಳು ಜನರಿಗೆ ಮನವರಿಕೆ ಮಾಡಿಕೊಡಬೇಕು
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

‘ಚರಂಡಿಯಲ್ಲಿನ ಹೂಳೆತ್ತಿ’

‘ಕಾರವಾರ ನಗರ ವ್ಯಾಪ್ತಿಯಲ್ಲಿನ ಚರಂಡಿಗಳಲ್ಲಿ ಸರಿಯಾಗಿ ಹೂಳೆತ್ತದ ಪರಿಣಾಮ ಕೆಲದಿನಗಳ ಹಿಂದೆ ಸುರಿದ ಮಳೆಗೆ ಜಲಾವೃತ ಉಂಟಾಯಿತು. ನಗರಸಭೆಯಿಂದ ಚರಂಡಿಗಳಲ್ಲಿ ಹೂಳೆತ್ತುವ ಕೆಲಸವಾಗಬೇಕು. ನೀರು ಹರಿದುಹೋಗುವ ಮಾರ್ಗದಲ್ಲಿ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನೂ ತೆರವುಗೊಳಿಸಿ’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.