ಯಲ್ಲಾಪುರ: ‘ನಮ್ಮ ಪೌರಾಣಿಕ ವ್ಯಕ್ತಿತ್ವಗಳಿಗೆ ಮಿತಿಗಳಿವೆ. ಆದರೆ ಕೃಷ್ಣನಿಗೆ ಯಾವುದೇ ಇತಿ ಮಿತಿಗಳಿಲ್ಲ. ಆತನ ಜೀವನದ ಕಥೆ ನಮಗೆ ಆದರ್ಶಪ್ರಾಯ’ ಎಂದು ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.
ಪಟ್ಟಣದ ವಿಶ್ವದರ್ಶನ ಕೇಂದ್ರಿಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಧಾಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಕ್ಕಳು ಏನೇ ಮಾಡಿದರೂ ಅದು ಸುಂದರಾಗಿ ಕಾಣುತ್ತದೆ. ಕೃಷ್ಣ ನಮ್ಮ ಜೀವನಕ್ಕೆ ಸಮೀಪವಾಗಿದ್ದಾನೆ. ಉಳಿದೆಲ್ಲ ಪುರಾಣ ಪುರುಷರಿಗಿಂತ ಕೃಷ್ಣ ನಮಗೆ ಹೆಚ್ಚು ನಮ್ಮವನಂತೆ ಕಾಣುತ್ತಾನೆ’ ಎಂದರು.
ತಾಳಮದ್ದಳೆ ಅರ್ಥಧಾರಿ ಚಂದ್ರಕಲಾ ಭಟ್ ಮಾತನಾಡಿ, ‘ಇಂದಿನ ಧಾವಂತದ ಬದುಕಿನಲ್ಲಿ ಸಂಸ್ಕೃತಿಯತ್ತ ಗಮನ ಕಡಿಮೆಯಾಗುತ್ತಿದೆ. ಈ ರೀತಿಯ ಕಾರ್ಯಕ್ರಮದಿಂದ ಪುರಾಣ ಪ್ರಪಂಚದತ್ತ ನಮ್ಮ ಗಮನ ಹರಿಯುತ್ತದೆ. ಇಂದು ಮೌಲ್ಯ ಶಿಕ್ಷಣದ ಅಗತ್ಯವಿದೆ’ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಕಾರ್ಯದರ್ಶಿ ನರಸಿಂಹ ಕೋಣೆಮನೆ, ರಂಗ ಸಹ್ಯಾದ್ರಿ ಸಂಸ್ಥೆಯ ಅಧ್ಯಕ್ಷ ಡಿ. ಎನ್ ಗಾಂವ್ಕರ, ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ ಇದ್ದರು.
ಕೇಂದ್ರೀಯ ಶಾಲೆಯ ವಿದ್ಯಾರ್ಥಿ ಶ್ರೀರಾಮ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ವನಿತಾ ಭಾಗ್ವತ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಆಸ್ಮಾಶೇಖ್ ನಿರ್ವಹಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.