
ಕುಮಟಾ: ಕುಮಟಾದಲ್ಲಿ ಪ್ರತೀ ವರ್ಷನಡೆಯುತ್ತಿದ್ದ ಕುಮಟಾ ವೈಭವ ಕಾರ್ಯಕ್ರಮಕ್ಕೆ ಸ್ಥಳೀಯ ಪುರಸಭೆ ಮುಖ್ಯಧಿಕಾರಿ ಎಂ.ಆರ್. ಸ್ವಾಮಿ ಪುರಸಭೆ ಅನುಮತಿ ರದ್ದುಪಡಿಸಿದರೆ, ಸಿ.ಪಿ.ಐ ಯೋಗೇಶ್ ಅವರು ಧ್ವನಿವರ್ಧಕ ಬಳಕೆಗೆ ಅನುಮತಿ ನಿರಾಕರಿಸಿ ಗುರುವಾರ ಉದ್ಘಾಟನೆಯಾಗಬೇಕಿದ್ದ ಕಾರ್ಯಕ್ರಮ ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ' ಎಂದು ಕುಮಟಾ ವೈಭವ ಕಾರ್ಯಕ್ರಮ ಸಂಘಟಕ ತಾಂಡವ ಕಲಾನಿಕೇತನ ಸಂಘಟನೆ ಅಧ್ಯಕ್ಷ ಮಂಜುನಾಥ ನಾಯ್ಕ ಮಿರ್ಜಾನ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಟಾ ವೈಭವ ಕಾರ್ಯಕ್ರಮ ನಡೆಸಲು ಮಾರ್ಚ್ ತಿಂಗಳಲ್ಲೇ ಮಹಾತ್ಮಾಗಾಂಧಿ ಮೈದಾನ ಬುಕ್ ಮಾಡಲಾಗಿತ್ತು. ಸ್ಥಳೀಯ ಪುರಸಭೆ ಅನುಮತಿ ನೀಡಿ ಮತ್ತೆ ಅದನ್ನು ರದ್ದುಪಡಿಸಿತ್ತು. ಆದರೆ ಜಿಲ್ಲಾಧಿಕಾರಿ ಅನುಮತಿ ನೀಡುವಂತೆ ಸೂಚಿಸಿದ್ದರು. ಎರಡನೇ ಬಾರಿ ಅನುಮತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಸಾಂಸ್ಕೃತಿಕ ಉದ್ದೇಶ ಹೊರತು ವಾಣಿಜ್ಯ ಉದ್ದೇಶಕ್ಕೆ ಮೈದಾನದಲ್ಲಿ ಅನುಮತಿ ನೀಡುವುದಿಲ್ಲಎಂದು ಎರಡನೇ ಬಾರಿ ಅನುಮತಿ ನಿರಾಕರಿಸಿದರು’ ಎಂದು ದೂರಿದರು.
ಪುನಃ ಜಿಲ್ಲಾಧಿಕಾರಿಗಳ ಮೊರೆ ಹೋದಾಗ ಅನುಮತಿ ನೀಡವುದಾಗಿ ಭರವಸೆ ನೀಡಿದ ಮುಖ್ಯಾಧಿಕಾರಿ ಕಾರ್ಯಕ್ರಮ ನಡೆಯುವ ಹೊತ್ತಿಗೆ ಸಂಪರ್ಕಕ್ಕೆ ಸಿಗದಂತೆ ದೂರ ಉಳಿದರು’ ಎಂದರು.
`ಮಹಾತ್ಮಾಗಾಂಧಿ ಮೈದಾನ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸಿ.ಪಿ.ಐ ಯೋಗೇಶ ಅವರು ನಿರಾಕರಿಸಿದರು. ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ಕರೆಸಿದ್ದೆವು’ ಎಂದರು.
‘ಮೈದಾನದಲ್ಲಿ ಕುಮಟಾ ಹಬ್ಬ, ಕುಮಟಾ ಉತ್ಸವ, ಯುಗಾದಿ ಉತ್ಸವ, ರಾಜ್ಯೋತ್ಸವ ಕಾರ್ಯಕ್ರಮ, ಕಳೆದ ವರ್ಷದವರೆಗೆ ಕುಮಟಾ ವೈಭವದಂಥ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ನಡೆದಿವೆ. ಕುಮಟಾದ ಸಾಂಸ್ಕೃತಿಕ ವಾತಾವರಣದ ಪರಿಚಯ ಇಲ್ಲದ ಈ ಇಬ್ಬರು ಅಧಿಕಾರಿಗಳು ತಮ್ಮ ಏಕಪಕ್ಷೀಯ ನಿರ್ಧಾರದಿಂದ ಸ್ಥಳೀಯರ ಮನಸ್ಸಿಗೆ ಘಾಸಿ ಮಾಡಿದ್ದಾರೆ’ ಎಂದು ತಿಳಿಸಿದರು.
ಕಾರ್ಯಕ್ರಮ ಹಣಕಾಸು ವಿಭಾಗ ಮುಖ್ಯಸ್ಥ ಹರೀಶ ನಾಯ್ಕ, ‘ಕಾರ್ಯಕ್ರಮಕ್ಕೆ ಅಡ್ಡಿ ಪಡಿಸದಂತೆ ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ, ಆರ್.ವಿ. ದೇಶಪಾಂಡೆ ಅವರು ಮನವಿ ಮಾಡಿದರೂ ಅವರ ಮಾತಿಗೆ ಇಬ್ಬರು ಅಧಿಕಾರಿಗಳು ಬೆಲೆ ಕೊಡಲಿಲ್ಲ. ಅನುಮತಿ ನಿರಾಕರಣೆಯ ಹಿಂದೆ ಯಾರ ಕೈವಾಡ ಇದೆ ಎನ್ನುವುದನ್ನು ಜಿಲ್ಲಾಧಿಕಾರಿ ಅವರು ತನಿಖೆಗೊಳಪಡಿಸಿ ಇಬ್ಬರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಬೇಕು’ ಎಂದರು.
ಸಂಘಟನೆಯ ರವಿ ಗಾವಡಿ, ಎಂ.ಎಚ್. ನಾಯ್ಕ, ಮಹೇಶ ಕರ್ಕಿಕರ್, ನಾಗರಾಜ ಕನ್ನಡಿಗ ಮತ್ತಿತರರು ಇದ್ದರು.
‘ಕಾರ್ಯಕ್ರಮಕ್ಕೆ ಬಂದಿದ್ದ ಗುರುಕಿರಣ್’
ಅನುಮತಿ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ದೂರು ಇದೇ ಮೈದಾದನಲ್ಲಿ ಕೆಲ ದಿನಗಳ ಹಿಂದೆ ಅಹಾರ ಮೇಳ ನಡದಿದೆ. ಈಗಲೂ ಪಟಾಕಿ ವ್ಯಾಪಾರ ಮಳಿಗೆಯಂಥ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಸಾಂಸ್ಕೃತಿಕ ಕಾರ್ಯಕ್ರಮವಾದ ಕುಮಟಾ ವೈಭವಕ್ಕೆ ವಾಣಿಜ್ಯ ಕಾರ್ಯಕ್ರಮದ ಹಣೆಪಟ್ಟಿ ಹಚ್ಚಲಾಗಿದೆ. ಮೊದಲೇ ಅನುಮತಿ ನಿರಾಕರಿಸಿದ್ದರೆ ನಾವು ಮೈದಾನದಲ್ಲಿ ಅಮ್ಯೂಸಮೆಂಟ್ ವಿವಿಧ ಅಂಗಡಿ ಮಳಿಗೆ ಅದ್ದೂರಿ ವೇದಿಕೆ ನಿರ್ಮಾಣದಂಥ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಇದರಿಂದ ಉಂಟಾಗಿರುವ ಹಾನಿ ಭರಿಸಲು ಇಬ್ಬರು ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.