ADVERTISEMENT

‘ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ, ಐತಿಹಾಸಿಕ ಪ್ರಮಾದ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 13:37 IST
Last Updated 15 ಜೂನ್ 2020, 13:37 IST
ಶಶಿಭೂಷಣ ಹೆಗಡೆ
ಶಶಿಭೂಷಣ ಹೆಗಡೆ   

ಸಿದ್ದಾಪುರ: ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜಾರಿಗೆ ಬಂದರೆ ಅದೊಂದು ಐತಿಹಾಸಿಕ ಪ್ರಮಾದವಾಗಲಿದೆ ಎಂದು ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಲಪಂಥೀಯ ಪಕ್ಷ ಯಾವತ್ತೂ ರೈತವಿರೋಧಿ ಹಾಗೂ ಬಂಡವಾಳಶಾಹಿ ಪರ ಎಂಬುದನ್ನು ಬಿಜೆಪಿ ಈ ಮೂಲಕ ತೋರಿಸಲು ಹೊರಟಿರುವಂತೆ ಕಾಣುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭೂಸುಧಾರಣೆ ಕಾಯ್ದೆಯ 63–ಎ, 79–ಎ ಮತ್ತು 79–ಬಿ ಕಲಂಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಮಾಡಿರುವ ತೀರ್ಮಾನದಿಂದ ಭೂಮಿ ಹೊಂದುವ ಮಿತಿ ಹೋಗುವುದರೊಂದಿಗೆ, ಕೃಷಿ ಜಮೀನನ್ನು ಕೃಷಿಯೇತರ ವ್ಯಕ್ತಿಗಳೂ ಹೊಂದುವ ಅವಕಾಶ ಲಭ್ಯವಾಗುತ್ತದೆ. ಆಗ ರೈತನ ಪರಿಸ್ಥಿತಿ ಏನಾಗಬಹುದು? ಸಣ್ಣ ರೈತರು ಒಮ್ಮೆ ಕೃಷಿ ಭೂಮಿ ಕಳೆದುಕೊಂಡರೆ ಪುನಃ ಖರೀದಿ ಮಾಡಲು ಸಾಧ್ಯವಾಗುತ್ತದೆಯೇ? ಇದರಿಂದ ಸಾಂಪ್ರದಾಯಿಕ ಕೃಷಿ ಹೋಗಲಿದೆ.

ADVERTISEMENT

ಕೃಷಿ ಜಮೀನು ಕಳೆದುಕೊಳ್ಳುವ ರೈತನಿಗೆ ಬೇರೆ ಉದ್ಯೋಗ ಇಲ್ಲದೇ, ನಿರುದ್ಯೋಗ ಹೆಚ್ಚಾಗಲಿದೆ. ಕೃಷಿ ಭೂಮಿಯನ್ನು ಕೊಳ್ಳುವ ಕೃಷಿಯೇತರ ವ್ಯಕ್ತಿ ಅಥವಾ ಉದ್ಯಮಿ ಅದನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲು ಮುಂದಾಗುವುದರಿಂದ ಆಹಾರ ಬೆಳೆಯುವ ಜಮೀನು ನಾಶವಾಗುತ್ತದೆ. ಇದರಿಂದ ಸಹಕಾರಿ ಸಂಸ್ಥೆಗಳಿಗೆ ಅಪಾಯ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಜಾರಿಗೆ ಬಂದಿರುವ ಪಂಚಾಯ್ತಿ ರಾಜ್ ಕಾಯ್ದೆ ಮತ್ತು ಭೂಸುಧಾರಣೆ ಕಾಯ್ದೆ, ಐತಿಹಾಸಿಕವಾದ ಹಾಗೂ ಜನಸ್ನೇಹಿಯಾದ ಕಾನೂನುಗಳು. ಸಂಪತ್ತಿನ ಕ್ರೋಡೀಕರಣ ಒಂದೇ ಕಡೆ ಆಗಬಾರದು ಎಂಬ ದೃಷ್ಟಿಯಿಂದ ‘ಉಳುವವನೆ ಹೊಲದೊಡೆಯ’ ಎಂಬ ಕಾಯ್ದೆಯನ್ನು ದೇವರಾಜ ಅರಸು ಮಾಡಿದರು. ಈ ಕಾಯ್ದೆಯ ಕಾರಣದಿಂದ ರಾಜ್ಯದ ಕೃಷಿ ಸಮುದಾಯ ಸಮಾಧಾನದಲ್ಲಿರಲು ಸಾಧ್ಯವಾಯಿತು’ ಎಂದರು.

‘ಯಾರನ್ನು ಮೆಚ್ಚಿಸಲು ಈ ಕಾಯ್ದೆ ತರಲಾಗುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.ಈ ಕಾಯ್ದೆಯ ತಿದ್ದುಪಡಿಯಿಂದ ಉಂಟಾಗುವ ಅಪಾಯದ ಬಗ್ಗೆ ಸಾಮಾನ್ಯ ಜನತೆ, ಸಹಕಾರಿ ಧುರೀಣರು, ರಾಜಕೀಯ ನೇತಾರರು ಯೋಚಿಸಬೇಕು. ಬಿಜೆಪಿಯಲ್ಲಿರುವವರೂ ತಮ್ಮ ಅಂತರಾತ್ಮವನ್ನು ಕೇಳಿಕೊಳ್ಳಬೇಕು’ ಎಂದರು.

**

ರಾಜ್ಯ ಸರ್ಕಾರ ತರಲಿರುವ ಭೂಸುಧಾರಣೆ ಕಾಯ್ದೆಯ ತಿದ್ದುಪಡಿಯಿಂದ ಆಗಲಿರುವ ಗಂಡಾಂತರದ ಬಗ್ಗೆ ಸಿದ್ಧಾಂತ, ಪಕ್ಷ, ವ್ಯಕ್ತಿಗಳನ್ನು ಮೀರಿ ನೋಡಬೇಕಾದ ಅಗತ್ಯವಿದೆ.
-ಶಶಿಭೂಷಣ ಹೆಗಡೆ, ಜೆಡಿಎಸ್ ಮುಖಂಡ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.