ADVERTISEMENT

ಕಳಚೆ ಭೂಕುಸಿತ: ಪುನರ್ ನಿರ್ಮಾಣ ಅಥವಾ ಸ್ಥಳಾಂತರದ ಜವಾಬ್ದಾರಿ ಸರ್ಕಾರದ್ದೆಂದ ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 3:58 IST
Last Updated 30 ಜುಲೈ 2021, 3:58 IST
ಸಿಎಂ ಬೊಮ್ಮಾಯಿ ಅವರ ಸಾಂದರ್ಭಿಕ ಚಿತ್ರ
ಸಿಎಂ ಬೊಮ್ಮಾಯಿ ಅವರ ಸಾಂದರ್ಭಿಕ ಚಿತ್ರ   

ಯಲ್ಲಾಪುರ: ಅತಿವೃಷ್ಟಿಯಿಂದ ಭೂಕುಸಿತವುಂಟಾಗಿ ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಕುಸಿದು ಹೋದ ತಾಲ್ಲೂಕಿನ ಕಳಚೆ, ತಳಕೆಬೈಲ್ ಭಾಗದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಪಂಚಾಯ್ತಿ ರಾಜ್ ವಿಕೇಂದ್ರೀಕರಣ ಅಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಅವರು, ಮುಖ್ಯಮಂತ್ರಿಗಳಿಗೆ ಹಾನಿಗೊಳಗಾದ ಪ್ರದೇಶಗಳ ಸಂಪೂರ್ಣ ಮಾಹಿತಿ ನೀಡಿ, ಸಂತ್ರಸ್ತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟರು.

ಈ ಭಾಗದಲ್ಲಿ ಮೂಲ ಸೌಕರ್ಯಗಳ ಪುನರ್‌ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವುದರ ಜೊತೆಯಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರವನ್ನು ಮಂಜೂರು ಮಾಡುವಂತೆ ವಿನಂತಿಸಿದರು.

ADVERTISEMENT

‘ಕಳಚೆ ಭಾಗದಲ್ಲಿ ಹಿಂದೆಂದೂ ಕಾಣದ ಪ್ರಕೃತಿ ವಿಕೋಪ ಕಂಡು ಬಂದಿದ್ದು, ಅನೇಕ ಮನೆಗಳು ಸಂಪೂರ್ಣ ಕುಸಿದು ಬಿದ್ದಿದೆ, ಅನೇಕ ಮನೆಗಳು ಭಾಗಶಃ ಹಾನಿಯಾಗಿದೆ. ಇನ್ನೂ ಭೂಕುಸಿಯುತ್ತಲೇ ಇದೆ. ಗ್ರಾಮಸ್ಥರು ಎಲ್ಲ ಕಳೆದುಕೊಂಡು ಅತಂತ್ರರಾಗಿ ಬೇರೆಯವರ ಆಶ್ರಯದಲ್ಲಿದ್ದಾರೆ’ ಎಂದ ಗ್ರಾಮಸ್ಥರು ‘ಎಸ್‌.ಆರ್‌.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಯೋಜನೆ ನೀಡಿದ್ದರು. ಅಲ್ಲದೇ ರಾಮಕೃಷ್ಣ ಹೆಗಡೆ ಮಂತ್ರಿಮಂಡಲದಲ್ಲಿ ಕಂದಾಯ ಖಾತೆ ಸಚಿವರಾಗಿದ್ದಾಗ ಈ ಭಾಗದ ಕೊಡಸಳ್ಳಿ ನಿರಾಶ್ರಿತರಿಗೆ ಹೆಗ್ಗಾರ್ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಿದ ಹೆಗ್ಗಳಿಕೆ ಅವರಿಗೆ ಸೇರಿದೆ’ ಎಂದು ಗಮನ ಸೆಳೆದರು.

ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ನಾರಾಯಣ ಗಾಂವ್ಕರ್ ಎಂಬವರಿಗೆ ಮನೆಕುಸಿತದ ಪರಿಹಾರ ₹95,100 ಚೆಕ್‌ ಅನ್ನು ಸಾಂಕೇತಿಕವಾಗಿ ವಿತರಿಸಿ, ಪುನರ್ ನಿರ್ಮಾಣ ಅಥವಾ ಸ್ಥಳಾಂತರ ಮಾಡುವ ಜವಾಬ್ದಾರಿ ಸರ್ಕಾರದ್ದು. ತುರ್ತಾಗಿ ರಸ್ತೆ ಸಂಪರ್ಕಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ವಾ.ಕ.ರ.ಸಾ. ಸಮಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಸ್ಥಳೀಯರಾದ ಉಮೇಶ ಭಾಗ್ವತ್, ಗಜಾನನ ಭಟ್ಟ, ವೆಂಕಟ್ರಮಣ ಬೆಳ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.