ಹಳಿಯಾಳ: ‘ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರದಿಂದ ಎಲ್ಲಾ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಅನುಕೂಲತೆ ಹೆಚ್ಚಾದಂತೆ ಶಿಕ್ಷಣದಲ್ಲಿ ಸ್ಪರ್ಧೆಯು ಹೆಚ್ಚಾಗುತ್ತಾ ಸಾಗಿದೆ. ಮಕ್ಕಳು ಸ್ಪರ್ಧೆಗಳಿಗೆ ಸಜ್ಜಾಗಬೇಕು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು.
ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ₹2 ಕೋಟಿ ವೆಚ್ಚದಿಂದ ನಿರ್ಮಾಣಗೊಳ್ಳಲಿರುವ ಹೆಚ್ಚುವರಿ ಕೊಠಡಿಗಳ ಅಡಿಗಲ್ಲು ಸಮಾರಂಭದಲ್ಲಿ ಬುಧವಾರ ಮಾತನಾಡಿದರು.
‘ಸರ್ಕಾರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿಣ ಮಹತ್ವ ಕೊಟ್ಟಿದೆ. ಹಿಂದೆ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡಕ್ಕೆ ತೆರಳುತ್ತಿದ್ದರು. ಈಗ ಎಲ್ಲೆಡೆ ವಿದ್ಯಾಸಂಸ್ಥೆಗಳಿವೆ.
‘ನಾವು ಗಳಿಸಿದ ಹಣದ ಸ್ವಲ್ಪ ಭಾಗವಾದರೂ ಸಮಾಜಕ್ಕಾಗಿ ವಿನಿಯೋಗಿಸಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಲ್ಲಿ ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಕಡಿಮೆಯಾಗುತ್ತಿದೆ. ಶಿಕ್ಷಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಶಿಕ್ಷಕರು ಕರ್ತವ್ಯಚ್ಯುತಿ ಆಗದಂತೆ ಎಚ್ಚರ ವಹಿಸಬೇಕು’ ಎಂದರು.
ಪ್ರಾಚಾರ್ಯ ಸತೀಶ ಎಂ. ಗಾಂವಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಶಾಸಕ ಆರ್.ವಿ ದೇಶಪಾಂಡೆ ಅವರ ನಿರಂತರ ಪ್ರಯತ್ನದಿಂದ ಸರ್ಕಾರಿ ಪಾಲಿಟೆಕ್ನಿಕ್ಗೆ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಅಡಿ ವಿವಿಧ ಕಂಪನಿಗಳ ಮೂಲಕ ಪಾಲಿಟೆಕ್ನಿಕ್ ಕಾಲೇಜಿಗೆ ಪಿಠೋಪಕರಣ, ಕಂಪ್ಯೂಟರ್ಗಳನ್ನು ವಿತರಿಸಲಾಗಿದ್ದು, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಕಾಲೇಜಿಗೆ ಸಂಪೂರ್ಣ ಮೂಲ ಸೌಕರ್ಯ ಒದಗಿಸಲಾಗಿದೆ. ಶಿಕ್ಷಣದಲ್ಲಿ ಯಾವುದೇ ಕೊರತೆ ಇಲ್ಲ’ ಎಂದರು.
ಪುರಸಭೆ ಸದಸ್ಯ ಅಜರ್ ಬಸರಿಕಟ್ಟಿ, ಸತ್ಯಜೇತ ಗಿರಿ, ಉಪನ್ಯಾಸಕಿ ಲಕ್ಷ್ಮಿ, ವೆಂಕಟೇಶ ಗೌಡ, ಪ್ರಿಯಾಂಕಾ ಕಾಕಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.