ಕಾರವಾರ: ಹೊನ್ನಾವರ– ಮುಳಬಾಗಿಲು ನಡುವಿನ ರಾಷ್ಟ್ರೀಯ ಹೆದ್ದಾರಿ 69ರಲ್ಲಿ (ಹಳೆಯ ಸಂಖ್ಯೆ 206) ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಶುಕ್ರವಾರ ಆದೇಶಿಸಿದ್ದಾರೆ. ಇದರಿಂದ ಹೊನ್ನಾವರ– ಶಿವಮೊಗ್ಗ– ಬೆಂಗಳೂರು ನಡುವಿನ ಪ್ರಯಾಣಿಕರಿಗೆ ತುಸು ಅನುಕೂಲವಾಗಿದೆ.
ಗೇರುಸೊಪ್ಪ ಸೂಳೆಮುರ್ಕಿ ತಿರುವಿನ ಸಮೀಪ ಜುಲೈ 16ರಂದು ಭೂ ಕುಸಿತವಾಗಿತ್ತು. ಬಳಿಕ ಇಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಇಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಹೆದ್ದಾರಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವರದಿ ನೀಡಿದ್ದರು. ಹೊನ್ನಾವರ ತಹಶೀಲ್ದಾರ್ ಸ್ಥಳ ವರದಿ ನೀಡಿದ್ದನ್ನು ಆಧರಿಸಿ ಭಟ್ಕಳ ಉಪ ವಿಭಾಗಾಧಿಕಾರಿ ಶಿಫಾರಸು ಮಾಡಿದ್ದರು.
ಈ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳು ಹಿಂದಿನ ಆದೇಶದಂತೆ ಕುಮಟಾ– ಶಿರಸಿ ಮಾರ್ಗದ ಮೂಲಕವೇ ಸಾಗಬೇಕು. ಕುಮಟಾ– ಬಡಾಳ ಘಟ್ಟ– ದೊಡ್ಮನೆ– ಸಿದ್ದಾಪುರ ಮಾರ್ಗವಾಗಿ ಚಲಿಸುವ ಬಸ್ಗಳು ಎಂದಿನಂತೆ ಇದೇ ಮಾರ್ಗದಲ್ಲಿ ಸಾಗಲು ಅವಕಾಶ ನೀಡಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.