ADVERTISEMENT

ಕುಮಟಾ ತಾಲ್ಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮಹಾಬಲಮೂರ್ತಿ ಕೊಡ್ಲೆಕೆರೆ

ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 14:12 IST
Last Updated 31 ಜನವರಿ 2019, 14:12 IST
ಮಹಾಬಲಮೂರ್ತಿ ಕೊಡ್ಲೆಕೆರೆ
ಮಹಾಬಲಮೂರ್ತಿ ಕೊಡ್ಲೆಕೆರೆ   

ಕುಮಟಾ:ತಾಲ್ಲೂಕಿನ ಕತಗಾಲದಲ್ಲಿ ಫೆ. 16, 17ರಂದು ನಡೆಯುವ ತಾಲ್ಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಕತೆಗಾರ, ಯಕ್ಷಗಾನ ಕಲಾವಿದ ಮಹಾಬಲಮೂರ್ತಿ ಕೊಡ್ಲೆಕೆರೆ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂಬಂಧ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ ನೇತೃತ್ವದ ಸಮಿತಿಯಲ್ಲಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ತಿಳಿಸಿದ್ದಾರೆ.

ಪರಿಚಯ:ಗೋಕರ್ಣದವರಾದ ಮಹಾಬಲಮೂರ್ತಿ ಕೊಡ್ಲಕೆರೆ, ಕರ್ನಾಟಕ ವಿಶ್ವವಿದ್ಯಾಲಯದಿಂದಎಂ.ಎ. ಪದವಿ ಪಡೆದಿದ್ದಾರೆ. ಕರ್ಣಾಟಕ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ನಿವೃತ್ತಗೊಂಡ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ವಾಣಿಜ್ಯ, ವಿದೇಶ ವಿನಿಮಯ ವ್ಯವಹಾರ ಸಲಹೆಗಾರರಾಗಿದ್ದಾರೆ.

ADVERTISEMENT

‘ಮತ್ತೊಂದು ಮೌನ’, ‘ಯಕ್ಷಸೃಷ್ಟಿ’, ‘ಅವನ ಜಗತ್ತಿನ ಹಗಲು’, ‘ನೆರಳು’ , ‘ಇತಿಹಾಸದ ನಂತರ’, ‘ನೆರಳು ಮತ್ತು ಇತರ ಕತೆಗಳು’ ಕಥಾ ಸಂಕಲನ, ‘ಚಂದ್ರಾಸ್ತಮಾನ’, ‘ಸದ್ದು’, ‘ಸ್ತ್ರೀ ಶಾಪ’, ‘ಬೀಜ ಗರ್ಭ’ ಕಾದಂಬರಿ, ‘ಮಾತು ಮತ್ತು ಪರಸ್ಪರ’, ‘ಜೀವ’, ‘ಮತ್ತೆ ಏಳಲು ಪೂರ್ವದಿಂದ’, ‘ಒಂದು ಗಿಳಿ’ ಎನ್ನುವ ಕವನ ಸಂಕಲನಗಳನ್ನೂ ರಚಿಸಿದ್ದಾರೆ.

ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ವೆಂಕಟಿಗನ ಹೆಂಡತಿ’ ಕತೆಯನ್ನು ನಾಟಕಕ್ಕೆ ಅಳವಡಿಸಿದ್ದಾರೆ. ಅಮೆರಿಕದ ‘ಅಕ್ಕ’ ಸಮ್ಮೇಳನ ಹಾಗೂ ಇಂಗ್ಲೆಂಡಿನ ಮಿಲೇನಿಯಂ ಕನ್ನಡ ಹಬ್ಬಗಳ ವಿವಿಧ ಯಕ್ಷಗಾನ ಕಾರ್ಯಕ್ರಮಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಚಂದನವಾಹಿನಿಯಲ್ಲಿ ಯಕ್ಷಗಾನ ಕಲೆಯ ಸುಮಾರು 50 ಹೆಸರಾಂತ ಕಲಾವಿದರ ಸಂದರ್ಶನ ನಡೆಸಿಕೊಟ್ಟಿದ್ದಾರೆ. ಚಲನಚಿತ್ರಗಳಿಗೆ ಗೀತೆ ರಚನೆ ಕೂಡ ಮಾಡಿದ್ದಾರೆ. ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪುರಸ್ಕಾರ ಪಡೆದ ಅವರ ‘ವೈಶಂಪಾಯನ ತೀರ’ ಕತೆ ಕಿರುತೆರೆಯಲ್ಲಿ ‘ಕಾಲದ ಕಡಲು‘ ಧಾರಾವಾಹಿಯಾಗಿದೆ. ಸಿ.ಜಿ.ಕೃಷ್ಣಸ್ವಾಮಿ ನಿರ್ದೇಶನದ ನಾಟಕ ರೂಪದಲ್ಲಿರುವ ಈ ಕತೆ ದೇಶದಾದ್ಯಂತ ಹಲವು ಪ್ರಯೋಗ ಕಂಡಿದೆ.

ಎನ್.ಬಿ.ಟಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ಮೀಟ್ ದಿ ಆಥರ್ಸ್, ದೀಸ್ ಆರ್ ಅವರ್ ರೈಟರ್ಸ್’ ಕಾರ್ಯಕ್ರಮದ ಹಲವು ವೇದಿಕೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಕೆ.ಎಸ್.ನರಸಿಂಹಸ್ವಾಮಿ ಹಾಗೂ ಗೋಪಾಲಕೃಷ್ಣ ಅಡಿಗ ಅವರ ಅಭಿನಂದನಾ ಗ್ರಂಥದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ‘ಮುದ್ದಣ ಕಾವ್ಯ ಪ್ರಶಸ್ತಿ’, ಕನ್ನಡ ಪುಸ್ತಕ ಪ್ರಾಧಿಕಾರ ಬಹುಮಾನ, ‘ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ’ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.