ಶಿರಸಿ: ಆರ್ಥಿಕ ಬಡತನದ ಕಾರಣಕ್ಕೆ ಮೊಬೈಲ್ ಖರೀದಿಸಲು ಸಾಧ್ಯವಾಗದೇ, ಆನ್ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ ಪ್ರತಿಭಾವಂತ ಸಹೋದರಿಯರಿಗೆ ಇಲ್ಲಿನ ಮನುವಿಕಾಸ ಸಂಸ್ಥೆಯು ಮೊಬೈಲ್ ಅನ್ನು ಕೊಡುಗೆಯಾಗಿ ನೀಡಿದೆ.
ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಬನವಾಸಿಯಲ್ಲಿ ವಿದ್ಯಾರ್ಥಿನಿ ಸಹೋದರಿಯರಾದ ಉಮಾವತಿ ಎಲ್ ಮತ್ತು ಕಲಾವತಿ ಎಲ್ ಅವರಿಗೆ ಮೊಬೈಲ್ ವಿತರಿಸಿದರು. ‘ಅಗತ್ಯವಿದ್ದಲ್ಲಿ ವಿದ್ಯಾರ್ಥಿನಿಯರ ಮುಂದಿನ ಶಿಕ್ಷಣಕ್ಕೆ ನೆರವು ನೀಡಲಾಗುವುದು. ಕಡುಬಡತನದ ಕಾರಣದಿಂದ ಪ್ರತಿಭಾವಂತರು ಶಿಕ್ಷಣದಿಂದ ವಂಚಿತರಾಗಬಾರದು’ ಎಂದು ಹೆಬ್ಬಾರ್ ಹೇಳಿದರು.
ಸೊರಬ ತಾಲ್ಲೂಕಿನ ಭದ್ರಾಪುರದ ಉಮಾವತಿ ಹಾಗೂ ಕಲಾವತಿ ಬನವಾಸಿಯಲ್ಲಿ ಹಾಸ್ಟೆಲ್ನಲ್ಲಿ ಉಳಿದುಕೊಂಡು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೋಗುತ್ತಿದ್ದರು. ಪ್ರಥಮ ಪಿಯುಸಿಯಲ್ಲಿ ಉಮಾವತಿ ಶೇ 86 ಅಂಕ ಗಳಿಸಿ ಕಲಾ ವಿಭಾಗದಲ್ಲಿ ಪ್ರಥಮಳಾಗಿದ್ದಳು. ಕಲಾವತಿ ಶೇ 70 ಅಂಕ ಪಡೆದಿದ್ದಳು. ದಿನವೂ ಕೂಲಿ ಕೆಲಸಕ್ಕೆ ಹೋಗಿ, ಆ ದುಡಿಮೆಯಿಂದ ಜೀವನ ನಡೆಸುತ್ತಿದ್ದ ಸಹೋದರಿಯರಿಗೆ ಮೊಬೈಲ್ ಖರೀದಿಸಲು ಹಣವಿರಲಿಲ್ಲ. ಹೀಗಾಗಿ, ಆನ್ಲೈನ್ ಪಾಠ ಕೇಳಲು ಸಾಧ್ಯವಾಗದೇ ನೊಂದುಕೊಂಡಿದ್ದರು.
‘ಬಡತನದ ಬೇಗೆ: ಆನ್ಲೈನ್ ಶಿಕ್ಷಣ ಮರೀಚಿಕೆ’ ತಲೆಬರಹದ ಅಡಿಯಲ್ಲಿ ‘ಪ್ರಜಾವಾಣಿ’ ಆಗಸ್ಟ್ 9ರಂದು ಈ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಅವರು ಕಾಲೇಜಿನ ಪ್ರಾಚಾರ್ಯ ಎಚ್.ದೇವೇಂದ್ರ ಅವರನ್ನು ಸಂಪರ್ಕಿಸಿ, ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿಯನ್ನು ಪಡೆದು, ಮೊಬೈಲ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.