
ಕುಮಟಾ: ‘ಪಾಲಕರಿಂದ ಪಾಕೆಟ್ ಮನಿ ತಂದು ಬೀದಿ ಬದಿಯ ಅಪಾಯಕಾರಿ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಕಾಲೇಜು ವತಿಯಿಂದಲೇ ಕ್ಯಾಂಟೀನ್ ಆರಂಭಿಸಿ ಅತ್ಯಂತ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಶುಚಿ ಆಹಾರ ಪೂರೈಸುತ್ತಿರುವುದು ಮಹತ್ವದ ಯೋಜನೆ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಹನುಮಂತ ಬೆಣ್ಣೆ ನೆಲ್ಲಿಕೆರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಎದುರು ಕೃಷಿ ಇಲಾಖೆಯ ನವೀಕರಣಗೊಂಡ ಕಟ್ಟಡದಲ್ಲಿ ಆರಂಭಿಸಲಾದ ರಿಯಾಯಿತಿ ದರದ ಕ್ಯಾಂಟೀನ್ನಲ್ಲಿ ವಿದ್ಯಾರ್ಥಿಗಳಿಗೆ ಶನಿವಾರ ಆಹಾರ ವಿತರಿಸಿ ಮಾತನಾಡಿದರು.
‘ತಾಲ್ಲೂಕಿನ ಬೇರೆ ಬೇರೆ ಹಳ್ಳಿಗಳಿಂದ ಕಾಲೇಜಿಗೆ ಬರುವ ಸುಮಾರು 500ಕ್ಕೂಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಮನೆಯಿಂದ ಆಹಾರ ತರದೆ ಇಡೀ ದಿನ ಉಪವಾಸ ಇರುತ್ತಿದ್ದರು. ಇನ್ನು ಕೆಲವರು ಹೆದ್ದಾರಿ ಬದಿಯ ಆಹಾರ ಸೇವಿಸುತ್ತಿದ್ದರು. ಈಗ ಕಾಲೇಜಿನ ಕ್ಯಾಂಟೀನ್ನಲ್ಲಿ ಅವರಿಗೆ ₹15 ರಿಂದ ₹20ಕ್ಕೆ ಹೊಟ್ಟೆ ತುಂಬಾ ಊಟ ನೀಡಲಾಗುವುದು. ಕಾಲೇಜು ಎದುರುಗಡೆ ಕೃಷಿ ಇಲಾಖೆಯ ಹಳೆಯ ಕಟ್ಟಡವನ್ನು ₹3 ಲಕ್ಷ ವೆಚ್ಚದಲ್ಲಿ ನವೀಕರಿಸಿ ಕ್ಯಾಂಟೀನ್ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ’ ಎಂದರು.
ಪ್ರಾಚಾರ್ಯ ಸತೀಶ ನಾಯ್ಕ, ‘ಸದ್ಯ ಕಾಲೇಜು ನಿಧಿಯಿಂದ ವಿದ್ಯಾರ್ಥಿಗಳಿಗೆ ನೀಡುವ ಆಹಾರ ವೆಚ್ಚ ಭರಿಸಲಾಗುವುದು. ದಾನಿಗಳು ಸಿಕ್ಕರೆ ವಿದ್ಯಾರ್ಥಿಗಳಿಗೆ ಇನ್ನು ಕಡಿಮೆ ದರದಲ್ಲಿ ಆಹಾರ ಪೂರೈಸಲಾಗುವುದು. ದಾನಿಗಳ ಮೂಲಕ ವಿದ್ಯಾರ್ಥಿಗಳ ವೆಚ್ಚ ಕಡಿಮೆ ಮಾಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ' ಎಂದರು.
ಪುರಸಭೆ ಸದಸ್ಯರಾದ ಮೋಹಿನಿ ಗೌಡ, ತುಳಸು ಗೌಡ, ಉಪ ಪ್ರಾಚಾರ್ಯ ಆರ್.ಎಚ್.ನಾಯ್ಕ, ಉಪನ್ಯಾಸಕರಾದ ಆನಂದ ನಾಯ್ಕ, ಪದ್ಮರಾಜ ಪಂಡಿತ, ನಾಗರಾಜ ಹೆಗಡೆ, ಉಷಾ ನಾಯ್ಕ, ಎಸ್.ಡಿ.ಎಂ.ಸಿ ಸದಸ್ಯರಾದ ನಿತ್ಯಾನಂದ ನಾಯ್ಕ, ಆಶಾ ನಾಯ್ಕ, ಲಕ್ಷ್ಮಿ ನಾಯ್ಕ, ಪ್ರಭಾಕರ ನಾಯ್ಕ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.