ಶಿರಸಿ: ರೈತರ ಹಿತಕ್ಕಾಗಿಯೇ ಗ್ರಾಮೀಣ ಭಾಗದಲ್ಲಿ ಸೌಕರ್ಯಗಳನ್ನು ವೃದ್ಧಿಸಲಾಗುತ್ತಿದೆ. ಕೃಷಿಗೆ ಪೂರಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲ್ಲೂಕಿನ ಕಾಳಂಗಿ ಗ್ರಾಮದಲ್ಲಿ ಶನಿವಾರ ₹2.5 ಕೋಟಿಗೂ ಅಧಿಕ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ, ಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಬನವಾಸಿ, ದಾಸನಕೊಪ್ಪ ಭಾಗದ ರೈತರು ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಹಿಂದೇಟು ಹಾಕುವ ಸಮಸ್ಯೆ ಬಗೆಹರಿಸಲು ಕೆರೆ ತುಂಬುವ ಯೋಜನೆ ಜಾರಿಗೆ ತರಲಾಯಿತು. ಈಗ ರಸ್ತೆ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.
‘ಅಧಿಕಾರದಲ್ಲಿದ್ದಾಗ ಜನರ ಹಿತಕಾಯುವ ಶಾಶ್ವತ ಕೆಲಸಗಳನ್ನು ಮಾಡಿದರೆ ಉಸಿರು ನಿಂತರೂ ಹೆಸರು ಉಳಿಸಿಕೊಳ್ಳಬಹುದು. ರೈತರು ನೆಮ್ಮದಿಯಾಗಿದ್ದರೆ ದೇಶವೆ ನೆಮ್ಮದಿ ಆಗಿರಲು ಸಾಧ್ಯ. ರೈತರನ್ನು ಸಂತುಷ್ಟಗೊಳಿಸಿದರೆ ನಾಡು ಅಭಿವೃದ್ಧಿಯ ಬೀಡಾಗುತ್ತದೆ’ ಎಂದರು.
ಬದನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಆಲೂರ, ಉಪಾಧ್ಯಕ್ಷ ಭದ್ರಾ ಗೌಡ, ಸದಸ್ಯ ಉಮೇಶ ಗೌಡ, ಕಾಳಂಗಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ, ಎ.ಪಿ.ಎಂ.ಸಿ. ನಿರ್ದೇಶಕ ಪ್ರಶಾಂತ ಗೌಡರ್, ಡಿಡಿಪಿಐ ಪಿ.ಬಸವರಾಜ, ಬಿಇಓ ಎಂ.ಎಸ್.ಹೆಗಡೆ, ಪಿಡಬ್ಲ್ಯೂಡಿ ಎಇಇ ಉಮೇಶ ನಾಯ್ಕ, ಪಿ.ಆರ್.ಇ.ಡಿ. ಎಇಇ ರಾಮಚಂದ್ರ ಗಾಂವಕರ್, ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.