ADVERTISEMENT

ಉದ್ಯಮಿಯ ಮನೆ ದರೋಡೆ ಪ್ರಕರಣ: ಮುಂಬೈ ಪೊಲೀಸರಿಂದ ತನಿಖೆ ಆರಂಭ

ಮತ್ತು ಬರುವ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿ ದರೋಡೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 15:13 IST
Last Updated 2 ಏಪ್ರಿಲ್ 2019, 15:13 IST
ಕಿರವತ್ತಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳನ್ನು ಯಲ್ಲಾಪುರ ಪೊಲೀಸರಿಗೆ ಹಸ್ತಾಂತರಿಸಲಾಯಿತು
ಕಿರವತ್ತಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳನ್ನು ಯಲ್ಲಾಪುರ ಪೊಲೀಸರಿಗೆ ಹಸ್ತಾಂತರಿಸಲಾಯಿತು   

ಯಲ್ಲಾಪುರ:ಮುಂಬೈನಲ್ಲಿ ಉದ್ಯಮಿಯೊಬ್ಬರ ದರೋಡೆ ಪ್ರಕರಣ ಸಂಬಂಧ ಅಲ್ಲಿನ ಜುಹೂ ಠಾಣೆಯ ಪೊಲೀಸರ ತಂಡ ತನಿಖೆ ಆರಂಭಿಸಿದೆ. ಪಟ್ಟಣಕ್ಕೆ ಬಂದಿರುವ ಆರು ಅಧಿಕಾರಿಗಳು, ಬಂಧಿತ ಐವರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ದರೋಡೆ ಮಾಡಿದ ವಸ್ತುಗಳೊಂದಿಗೆಹುಬ್ಬಳ್ಳಿಗೆ ಬಸ್‌ನಲ್ಲಿ ತೆರಳುತ್ತಿದ್ದ ಆರೋಪಿಗಳನ್ನು ಕಿರವತ್ತಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಮತ್ತು ಪೊಲೀಸರು ಸೋಮವಾರ ಬಂಧಿಸಿದ್ದರು. ಅವರಿಂದಸುಮಾರು ₹ 75 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಭಗಳು ಹಾಗೂ ದೇಶ ವಿದೇಶಗಳ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.

ಉಂಡ ಮನೆಗೇ ಕನ್ನ: ಮುಂಬೈನ ಜುಹೂ ಪ್ರದೇಶದಲ್ಲಿ ಉದ್ಯಮಿ, 73 ವರ್ಷದ ದುಗ್ಗಡ್ ಎಂಬುವವರ ಆರೋಪಿಗಳು ಮೂರು ತಿಂಗಳಿನಿಂದ ಕೆಲಸಕ್ಕಿದ್ದರು. ದರೋಡೆಗೆ ಸಂಚು ರೂಪಿಸಿದ್ದ ಅವರು, ಉದ್ಯಮಿಗೆ ಮಾರ್ಚ್31ರಂದು ಬೆಳಿಗ್ಗೆ ಮತ್ತು ಬರುವ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಮುಂಬೈನಿಂದ ಮಂಗಳೂರು ಕಡೆಗೆ ತೆರಳುವ ಬಸ್‌ನಲ್ಲಿ ಬಂದ ಆರೋಪಿಗಳು, ಹುಬ್ಬಳ್ಳಿಯಲ್ಲಿ ಇಳಿಯಬೇಕಾಗಿತ್ತು. ಆದರೆ,ಏ.1ರಂದು ಬೆಳಗಿನ ಜಾವ ಅಂಕೋಲಾದಲ್ಲಿಬಂದು ಇಳಿದರು.

ADVERTISEMENT

ಅಲ್ಲಿಂದ ವಾಪಸ್ ಬಸ್ ಮೂಲಕ ಹುಬ್ಬಳ್ಳಿಗೆ ತೆರಳುತ್ತಿದ್ದಾಗ ಕಿರವತ್ತಿಯ ಚುನಾವಣಾ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ತನಿಖೆ ಕೈಗೊಂಡರು. ಆಗ ಆರೋ‍ಪಿಗಳುಸಿಕ್ಕಿಬಿದ್ದರು.

ಆರೋಪಿಗಳಾದನೇಪಾಳದಸೀತಾರಾಮ ಭೀಮ ಬಹದ್ದೂರ್ ಸಾವುದ್ (31), ಏಕಮಿಥಮಾನ್ ಬಹದ್ದೂರ್ ಷಾ (18), ದುಮ್ಮರ್ ದಿಲ್ ಬಹದ್ದೂರ್ ಸಾವುದ್ (20) ಅವರನ್ನು ಕಾರವಾರದ ಜೈಲಿಗೆ ಕಳುಹಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಬಾಲಸಿಂಗ್ ಬೀರು ಬಹದ್ದೂರ ಷಾವುದ್ಗೆ (17) ಹಾಗೂ ರಾಮ್ ನರಸಿಂಗ್ ಸಾವುದ್ (17) ಅವರವಿಚಾರಣೆ ಮುಂದುವರಿದಿದೆ.

ಅವರಿಬ್ಬರು ಹುಬ್ಬಳ್ಳಿಯ ನವನಗರದಲ್ಲಿ ಕೆಲಸ ಮಾಡುತ್ತಿದ್ದು, ರಾಮ್ನರಸಿಂಗ್‌ನ ತಂದೆ ಯಲ್ಲಾಪುರದಲ್ಲಿ ಗೂರ್ಖಾ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರ ಮನೆಯಲ್ಲಿ ಯಾರಿಗೋ ಆರೋಗ್ಯ ಸರಿ ಇಲ್ಲವೆಂದು ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬಂದಿದ್ದರು. ವಾಪಸ್ ಹುಬ್ಬಳ್ಳಿಗೆ ಬಸ್‌ನಲ್ಲಿ ತೆರಳುತ್ತಿದ್ದಾಗ ತಮ್ಮದೇಶದವರೇಆದ ಮೂವರು ಆರೋಪಿಗಳ ಪರಿಚಯವಾಯಿತು ಎಂದು ತಿಳಿದುಬಂದಿದೆ. ಅವರು ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ದರೋಡೆ ಮಾಡಲಾದ ವಸ್ತುಗಳನ್ನು ವಶಪಡಿಸಿಕೊಂಡ ಚುನಾವಣಾ ಆಯೋಗದ ಅಧಿಕಾರಿಗಳು, ಆಭರಣಗಳು ಹಾಗೂ ನಗದಿನ ಮೌಲ್ಯ ಲೆಕ್ಕ ಹಾಕಿದ್ದಾರೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಸೋಮವಾರ ರಾತ್ರಿಯೇ ಯಲ್ಲಾಪುರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.