ADVERTISEMENT

ನಿರಾಶ್ರಿತರ ಕ್ಯಾಂಪಿನಲ್ಲಿ ಹೊಸ ವರ್ಷಾಚರಣೆಯ ಸಡಗರ: ಟಿಬೆಟ್‌ ಸಂಸ್ಕೃತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 7:08 IST
Last Updated 19 ಫೆಬ್ರುವರಿ 2026, 7:08 IST
<div class="paragraphs"><p>ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ ನಂ.1ರ ಗಾಡೆನ್‌ ಜಾಂಗತ್ಸೆ ಬೌದ್ಧ ಮಂದಿರದಲ್ಲಿ ಲೋಸಾರ್‌ ಮೊದಲ ದಿನದಂದು ಟಿಬೆಟಿಯನ್ನರು ಗುರುಪೀಠಕ್ಕೆ ನಮಸ್ಕರಿಸಿದರು</p></div>

ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ ನಂ.1ರ ಗಾಡೆನ್‌ ಜಾಂಗತ್ಸೆ ಬೌದ್ಧ ಮಂದಿರದಲ್ಲಿ ಲೋಸಾರ್‌ ಮೊದಲ ದಿನದಂದು ಟಿಬೆಟಿಯನ್ನರು ಗುರುಪೀಠಕ್ಕೆ ನಮಸ್ಕರಿಸಿದರು

   

ಮುಂಡಗೋಡ: ಟಿಬೆಟಿಯನ್ನರ ಹೊಸ ವರ್ಷ ‘ಲೋಸಾರ್‌’ 2153 ಅನ್ನು ತಾಲ್ಲೂಕಿನಲ್ಲಿ ನೆಲೆಸಿರುವ ಟಿಬೆಟಿಯ ನ್ನರು ಬುಧವಾರ ಆಚರಿಸಿದರು. ಕ್ಯಾಂಪ್‌ ನಂ.1ರ ಗಾಡೆನ್‌ ಜಾಂಗತ್ಸೆ ಬೌದ್ಧ ಮಂದಿರದಲ್ಲಿ, ಮಂಗಳವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ, ವಿಶೇಷ ಪೂಜೆ ನಡೆಸಲಾಯಿತು. ಬಿಕ್ಕುಗಳು ರಾತ್ರಿ ಪೂರ್ತಿ ವಿಶೇಷ ಪೂಜೆ ಕೈಗೊಂಡು, ಹೊಸ ವರ್ಷದಲ್ಲಿ ಕಷ್ಟ, ಕಾರ್ಪಣ್ಯಗಳು ದೂರಾಗಿ, ಎಲ್ಲೆಡೆ ಶಾಂತಿ ನೆಲೆಸಿ, ನೆಮ್ಮದಿಯ ಜೀವನ ಎಲ್ಲರದಾಗಲಿ ಎಂದು ಪ್ರಾರ್ಥಿಸಿದರು.

ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದ ಬೌದ್ಧ ಮಂದಿರದಲ್ಲಿ, ಬುದ್ಧನ ಮುಂದೆ ಬಿಕ್ಕುಗಳು ನಮಿಸಿದರು. ಬೌದ್ಧ ಮಂದಿರದ ಹಿರಿಯ ಬಿಕ್ಕುಗಳು, ಕಿರಿಯ ಬಿಕ್ಕುಗಳಿಗೆ ಆಶೀರ್ವದಿಸಿದರು. ಬೌದ್ಧ ಅನುಯಾಯಿಗಳು ಮಂದಿರದ ಆವರಣದಲ್ಲಿ ಕುಳಿತುಕೊಂಡು, ಬಿಕ್ಕುಗಳ ಪೂಜೆಯನ್ನು ಕಣ್ತುಂಬಿಕೊಂಡರು.

ADVERTISEMENT

ಬೆಣ್ಣೆಯಿಂದ ತಯಾರಿಸಿದ ವಿವಿಧ ಆಕಾರದ ಮೂರ್ತಿಗಳು, ಸಿಹಿ ಖಾದ್ಯಗಳು, ಬಿಸ್ಕಟ್‌, ತಂಪುಪಾನೀಯ ಸೇರಿದಂತೆ ಹಬ್ಬದ ಖಾದ್ಯಗಳನ್ನು ದೇವರಿಗೆ ಸಮರ್ಪಿಸಿದರು. ಗುರುವಿನ ಆಸನಕ್ಕೆ ಬಿಳಿ ರುಮಾಲನ್ನು ಹಾಕಿ, ತಲೆಬಾಗಿ ನಮಸ್ಕರಿಸಿದರು.

ವಿವಿಧ ಕ್ಯಾಂಪ್‌ಗಳ ಟಿಬೆಟಿಯನ್ನರು ಬೌದ್ಧ ಮಂದಿರಗಳಿಗೆ ಬೆಳಿಗ್ಗೆಯಿಂದಲೇ ಭೇಟಿ ನೀಡಿ, ನಮಸ್ಕರಿಸಿದರು. ಸಾಂಪ್ರದಾಯಿಕ ವೇಷಭೂಷಣ ತೊಟ್ಟಿದ್ದ ಟಿಬೆಟಿಯನ್ನರು, ‘ತಾಶಿ ದೆಲೆಕ್‌’ ಎನ್ನುತ್ತ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಟಿಬೆಟಿಯನ್ನರ ಧಾರ್ಮಿಕ ನಾಯಕ ದಲೈಲಾಮಾ ಅವರು, ಎರಡು ತಿಂಗಳವರೆಗೆ ವಾಸ್ತವ್ಯ ಹೂಡಿದ್ದ, ಕ್ಯಾಂಪ್‌ ನಂ.2ರ ಡ್ರೆಪುಂಗ್‌ ಗೋಮಾಂಗ್‌ ಬೌದ್ಧ ಮಂದಿರಕ್ಕೆ ಭೇಟಿ ನೀಡುವರ ಸಂಖ್ಯೆ ಹೆಚ್ಚಿತ್ತು. ದಲೈಲಾಮಾ ಕುಳಿತಿದ್ದ ಪೀಠಕ್ಕೆ ನಮಸ್ಕರಿಸಿ, ಬಿಳಿ ರುಮಾಲು ಅರ್ಪಿಸುತ್ತಿರುವುದು ಕಂಡುಬಂತು.

ದಲೈಲಾಮಾ ತಂಗಿದ್ದ ಬೌದ್ಧ ಮಂದಿರದ ನಾಲ್ಕನೇ ಮಹಡಿಯ ಕೋಣೆಗಳು ಈಗ ಶ್ರದ್ಧಾ, ಭಕ್ತಿಯ ಸ್ಥಳವಾಗಿದ್ದು, ಲೋಸಾರ್‌ ಮೊದಲ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಟಿಬೆಟಿಯನ್ನರು ಭೇಟಿ ನೀಡಿ, ನಮಸ್ಕರಿಸಿದರು.

‘ದಲೈಲಾಮಾ ಅವರ ಸಹೋದರ ಗರಿ ರಿನ್‌ಪೋಚೆ (80) ಮಂಗಳವಾರ ನಿಧನ ಹೊಂದಿರುವುದರಿಂದ, ಲೋಸಾರ್‌ ಆಚರಣೆಯನ್ನು ಪೂಜೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮೊದಲ ಮೂರು ದಿನಗಳ ಕಾಲ ನಿಗದಿಯಾಗಿದ್ದ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಅನುಮಾನ’ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.