ADVERTISEMENT

ಭಟ್ಕಳ | ಮುರುಡೇಶ್ವರ  ಸಮಗ್ರ ಅಭಿವೃದ್ಧಿಗೆ ಬದ್ಧ: ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:40 IST
Last Updated 17 ಫೆಬ್ರುವರಿ 2026, 6:40 IST
ಮುರುಡೇಶ್ವರದಲ್ಲಿ ನಡೆದ ಶಿವರಾತ್ರಿ ಅಹೋರಾತ್ರಿ ಸಾಂಸ್ಕೃತಿಕ ಜಾಗರಣಾ ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು
ಮುರುಡೇಶ್ವರದಲ್ಲಿ ನಡೆದ ಶಿವರಾತ್ರಿ ಅಹೋರಾತ್ರಿ ಸಾಂಸ್ಕೃತಿಕ ಜಾಗರಣಾ ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು   

ಭಟ್ಕಳ: ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ನಮ್ಮ ಅತಿಥಿಗಳು, ಅವರನ್ನು ನಾವು ಸೇವಾ ಮನೋಭಾವದಿಂದ ಸತ್ಕರಿಸಬೇಕು. ಸ್ಥಳಿಯರು ಪ್ರವಾಸಿಗರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ಅವರು ಭಾನುವಾರ ಶಿವರಾತ್ರಿ ಅಂಗವಾಗಿ ಮುರುಡೇಶ್ವದಲ್ಲಿ ನಡೆದ ಅಹೋರಾತ್ರಿ ಜಾಗರಣಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಶಿವನ 5 ದೇವಸ್ಥಾನಗಳಿದ್ದು. ಈಗಾಗಲೇ ಎಲ್ಲ ದೇವಸ್ಥಾನಗಳು ಅಭಿವೃದ್ಧಿ ಕಾಣುತ್ತಿದೆ. ಮುರುಡೇಶ್ವರದಲ್ಲಿ ಆಡಿ ಬೆಳೆದ ನಾನು ದೇವರ ಕೃಪೆ ಮತ್ತು ಕ್ಷೇತ್ರದ ಜನರ ಆಶಿರ್ವಾದದಿಂದ ಈ ಸ್ಥಾನಕ್ಕೆ ಬರುವಂತಾಯಿತು. ಮುರುಡೇಶ್ವರ ಜಾಗರಣೋತ್ಸವ ಕಾರ್ಯಕ್ರಮವು ಪ್ರತಿ ವರ್ಷವು ನಡೆಯಬೇಕಾಗಿದೆ. ಶಿಕ್ಷಣ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಕೊರತೆಯಾಗದಂತೆ ನಾನು ನೋಡಿಕೊಳ್ಳುವೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವರಾತ್ರಿ ವಿಶೇಷವಾಗಿದ್ದು ಮುರುಡೇಶ್ವರ, ಗೋಕರ್ಣ ಸೇರಿದಂತೆ ಎಲ್ಲ ಶಿವ ದೇವಾಲಯಗಳಲ್ಲು ಜಿಲ್ಲಾಡಳಿತ ಮುತುವರ್ಜಿಯಿಂದ ಪೋಲಿಸ್ ಇಲಾಖೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಕ್ರಮನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ ಎಂದರು. ಈ ಸಂದರ್ಭದಲ್ಲಿ ಮುರುಡೇಶ್ವರದ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ಸೇವಾ ಟ್ರಸ್ಟ್ ಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಲೋಗೋ ಅನಾವರಣ ಮಾಡಲಾಯಿತು. ಸ್ಥಳೀಯರ ಪರವಾಗಿ ಮಂಕಾಳ ವೈದ್ಯ ದಂಪತಿಯನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಸಹಸ್ರಾರು ಭಕ್ತರು ಪಾಲ್ಗೊಂಡ ಜಾಗರಣೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಬೆಳಗ್ಗಿನವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿತು.

ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ, ಡಾ.ದೀಲಿಷ್ ಶಶಿ, ಭಟ್ಕಳ ಉಪವಿಭಾಗಾಧಿಕಾರಿ ಪ್ರವೀಣ ಕರಾಂಡೆ, ತಹಶೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ, ಉತ್ತರ ಕನ್ನಡ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಪ್ರಮುಖರಾದ ರಾಜು ನಾಯ್ಕ, ನಾಗರತ್ನ ಪಡಿಯಾರ, ಎಸ್.ಎಸ್‌ ಕಾಮತ್‌, ನಯನಾ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.