ಶಿರಸಿ: ತಾಲ್ಲೂಕಿನ ಚಿಪಗಿಯಲ್ಲಿ ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಶುಕ್ರವಾರ ಜೀವಂತ ನಾಗರಹಾವಿಗೆ ಪೂಜೆ ಮಾಡಿ ನಾಗರ ಪಂಚಮಿ ಆಚರಿಸಿದರು.
ಕಳೆದ ಹದಿಮೂರು ವರ್ಷಗಳಿಂದ ಹಬ್ಬದ ದಿನ ಅವರು ನೈಜ ನಾಗರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಗುರುವಾರ ಸೆರೆಹಿಡಿದಿದ್ದ ಹಾವಿಗೆ ಮನೆಯ ಆವರಣದಲ್ಲಿ ಪೂಜೆ ಸಲ್ಲಿಸಿದರು.
ನೆರೆಹೊರೆಯ ಹತ್ತಾರು ಜನರೂ ಪೂಜೆಯಲ್ಲಿ ಭಾಗಿಯಾದರು. ಚಿಕ್ಕ ಮಕ್ಕಳು, ಮಹಿಳೆಯರು ಭಯವಿಲ್ಲದೆ ಹಾವಿಗೆ ಪೂಜೆ ಸಲ್ಲಿಸಿದರು.
'ಹಾವಿನ ಕುರಿತ ಭಯ, ಮೂಢನಂಬಿಕೆ ಹೋಗಲಾಡಿಸುವ ಉದ್ದೇಶದಿಂದ ಪ್ರತಿ ನಾಗರ ಪಂಚಮಿ ದಿನ ಜೀವಂತ ಹಾವಿಗೆ ಪೂಜೆ ಸಲ್ಲಿಸುತ್ತಿದ್ದೇನೆ. ಹಾವು ಕೇವಲ ನೀರು ಕುಡಿಯುತ್ತವೆ, ಹಾಲು ಕುಡಿಯುವುದಿಲ್ಲ ಎಂಬುದನ್ನೂ ಪೂಜೆ ವೇಳೆ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ' ಎಂದು ಪ್ರಶಾಂತ್ ಹೇಳಿದರು.
ತಾಲ್ಲೂಕಿನ ವಿವಿಧೆಡೆ ನಾಗರ ಕಟ್ಟೆಗೆ ಭಕ್ತರು ಪೂಜೆ ಸಲ್ಲಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ನೀಲೆಕಣಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ದೇವಾಲಯದ ಹೊರಗಿರುವ ನಾಗರ ಕಲ್ಲಿಗೆ ನೂರಾರು ಜನರು ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.