ಕಾರವಾರ: ನಗರ ಸಮೀಪದ ದೇವಬಾಗ ಕಡಲತೀರದಲ್ಲಿ ಆಲಿವ್ ರಿಡ್ಲಿ ಕಡಲಾಮೆಯು ಮೊಟ್ಟೆಯಿಟ್ಟಿದೆ. ಒಂದು ದಶಕದ ಬಳಿಕ ಈ ಸ್ಥಳವನ್ನು ಆಮೆ ವಂಶಾಭಿವೃದ್ಧಿಗೆ ಆಯ್ಕೆ ಮಾಡಿಕೊಂಡಿದೆ.
ಮಂಗಳವಾರ ಬೆಳಿಗ್ಗೆ ಸ್ಥಳೀಯ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾಗ ಮರಳಿನಲ್ಲಿ ಗುಂಡಿ ಮಾಡಿದ್ದನ್ನು ಗಮನಿಸಿದರು. ಸಮೀಪಕ್ಕೆ ತೆರಳಿದಾಗ ಅದರಲ್ಲಿ ಆಮೆಯ ಮೊಟ್ಟೆಗಳು ಕಂಡುಬಂದವು. ಈ ವಿಚಾರವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮರಳಿನ ಗುಂಡಿಯಲ್ಲಿ 78 ಮೊಟ್ಟೆಗಳು ಸಿಕ್ಕಿವೆ.
‘ದೇವಬಾಗದಲ್ಲಿ ಕಡಲಾಮೆ ಮೊಟ್ಟೆಯಿಟ್ಟಿದ್ದು 10 ವರ್ಷಗಳ ನಂತರ ಈ ವರ್ಷ ದಾಖಲಾಗಿದೆ. ಡಿ.ಸಿ.ಎಫ್ ಡಾ.ವಸಂತ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮೊಟ್ಟೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಮೊಟ್ಟೆಗಳಿರುವ ಪ್ರದೇಶದಲ್ಲಿ ಗೂಡು ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ರಾತ್ರಿ ಹಗಲು ಕಾವಲು ಕಾಯಲಿದ್ದಾರೆ. 45 ದಿನಗಳ ಬಳಿಕ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. ಬಳಿಕ ಅವುಗಳನ್ನು ಸಮುದ್ರಕ್ಕೆ ಬಿಡಲಾಗುವುದು’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ (ಮರೈನ್ ವಿಭಾಗ) ಪ್ರಮೋದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಜನವರಿಯಿಂದ ಫೆಬ್ರುವರಿ ಕೊನೆಯ ತನಕ ಆಮೆಗಳು ಮೊಟ್ಟೆಯಿಡುವ ಸಮಯವಾಗಿದೆ. ಈ ರೀತಿ ಮತ್ತೆಲ್ಲಾದರೂ ಕಡಲತೀರಗಳಲ್ಲಿ ಆಮೆ ಮೊಟ್ಟೆಗಳು ಕಂಡುಬಂದರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅಪರೂಪದ ಜೀವಿಯ ಸಂತತಿ ಉಳಿಸಲು ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.