ADVERTISEMENT

ಕಾರು, ಲಾರಿ ಮುಖಾಮುಖಿ ಡಿಕ್ಕಿ: ಒಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 15:20 IST
Last Updated 14 ಏಪ್ರಿಲ್ 2021, 15:20 IST
ಅಂಕೋಲಾ ತಾಲ್ಲೂಕಿನ ಕಂಚಿನಬಾಗಿಲು ಬಳಿ ಬುಧವಾರ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು
ಅಂಕೋಲಾ ತಾಲ್ಲೂಕಿನ ಕಂಚಿನಬಾಗಿಲು ಬಳಿ ಬುಧವಾರ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು   

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಬಳಿಯ ತಿರುವಿನಲ್ಲಿ ಬುಧವಾರ ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಕಾರವಾರದವರಾಗಿದ್ದು, ಹುಬ್ಬಳ್ಳಿಯ ಶಾಂತಿನಗರ ಕೇಶವಾಪುರದಲ್ಲಿ ನೆಲೆಸಿರುವ ಗಣಪತಿ ವಿಠೋಬಾ ಗಾಂವಕರ (61) ಮೃತರು. ಕಾರಿನಲ್ಲಿದ್ದ ಪ್ರೀತಿ ಚಂದ್ರಹಾಸ ಗಾಂವಕರ (30) ಮತ್ತು ಚಾಲಕ ಮಂಜುನಾಥ ಕೌಜಗೇರಿ (41) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರೀತಿ ಗಾಂವಕರ ಅವರು ತಂದೆ ಗಣಪತಿ ಗಾಂವಕರ ಜತೆಗೆ ಕಾರವಾರದ ಮಾಜಾಳಿಯಲ್ಲಿ ಮೃತರಾದ ತಮ್ಮ ಮಾವನ ಅಂತಿಮ ಸಂಸ್ಕಾರಕ್ಕೆಂದು ಹುಬ್ಬಳ್ಳಿಯಿಂದ ಹೊರಟಿದ್ದರು. ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಲಾರಿ ಅಂಕೋಲಾದಿಂದ ಯಲ್ಲಾಪುರ ಮಾರ್ಗವಾಗಿ ಚಲಿಸುತ್ತಿತ್ತು. ಈ ವೇಳೆ ರಸ್ತೆಯ ತಿರುವಿನಲ್ಲಿ ಎರಡೂ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ADVERTISEMENT

ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ, ಸಿ.ಪಿ.ಐ ಕೃಷ್ಣಾನಂದ ನಾಯ್ಕ, ಪಿ.ಎಸ್.ಐ ಈ.ಸಿ.ಸಂಪತ್ ಭೇಟಿ ನೀಡಿ ಪರಿಶೀಲಿಸಿದರು. ಹೆದ್ದಾರಿ ಗಸ್ತು ವಾಹನ ಮತ್ತು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಇದೇ ಮಾರ್ಗದಲ್ಲಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.