ಯಲ್ಲಾಪುರ: ತಾಲ್ಲೂಕಿನಲ್ಲಿ ಭತ್ತದ ಬೆಳೆಯು ಬಹುತೇಕ ಗರ್ಭಾಂಕುರ ಹಂತದಲ್ಲಿದ್ದು, ಮಂಚಿಕೇರಿ ಹೋಬಳಿಯ ಕೆರೆಹೊಸಳ್ಳಿ, ಬಿದ್ರಳ್ಳಿ, ಉಮ್ಮಚಗಿ, ತೋಳಗೋಡ, ಹೆಮ್ಮಾಡಿ, ಭರಣಿ ಹಾಗೂ ಭರತನಹಳ್ಳಿ ಗ್ರಾಮಗಳಲ್ಲಿ ಅಲ್ಲಲ್ಲಿ ಕಂದುಜಿಗಿ ಹುಳು, ಎಲೆಸುರುಳಿ ಹುಳುಗಳ ಬಾಧೆ ಹಾಗೂ ಬೆಂಕಿರೋಗದ ಬಾಧೆ ಕಂಡುಬಂದಿದೆ ಎಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಕೃಷಿ ಇಲಾಖೆ ಸಿಬ್ಬಂದಿ ಈಚೆಗೆ ಬಾಧಿತ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಶಿಫಾರಸ್ಸು ಮಾಡಿದ್ದಾರೆ. ಕಂದುಜಿಗಿ ಹುಳು ಬಾಧಿತ ಹೊಲಗಳಿಗೆ ಗದ್ದೆಯಲ್ಲಿ ನೀರನ್ನು ಕಡಿಮೆ ಮಾಡಬೇಕು, ಕೀಟನಾಶಕಗಳಾದ ಇಮಿಡಾಕ್ಲೋಪ್ರಿಡ್ 0.3 ಮಿಲಿ ಪ್ರತೀ ಲೀಟರ್
ನೀರಿಗೆ ಅಥವಾ ಥಯೋಮೆಥಾಕ್ಸಾಮ್ 0.5 ಗ್ರಾಂ ಪ್ರತೀ ಲೀಟರ್ ನೀರಿಗೆ ಅಥವಾ ಬುಪ್ರೋಪಿಜಿನ್ 1.5 ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣವನ್ನು ತಯಾರಿಸಿ ಭತ್ತದ ಸಸಿಗಳು ಸಂಪೂರ್ಣ ಒದ್ದೆಯಾಗುವಂತೆ
ಸಿಂಪಡಿಸಬೇಕು.
ಎಲೆಸುರುಳಿ ಕೀಟದ ಹತೋಟಿಗಾಗಿ ಕೀಟನಾಶಕಗಳಾದ ಪ್ರೊಫೆನೊಫಾಸ್ 50 ಇಅ 2 ಮಿಲಿ ಅಥವಾ ಕ್ಲೋರೋಪೈರಿಪಾಸ್ 20 ಇಅ 2 ಮಿಲಿ ಅಥವಾ ಕ್ವಿನಾಲ್ಫಾಸ್ 25 ಇಅ 2 ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಎಕರೆಗೆ 200 ಲೀ ಸಿಂಪರಣಾ ದ್ರಾವಣವನ್ನು ತಯಾರಿಸಿ ಸಿಂಪಡಿಸಬೇಕು. ಕಾಂಡ ಕೊರೆಯುವ ಹುಳುವಿನ ಹತೋಟಿಗಾಗಿ ಕ್ಲೋರೋಪೈರಿಪಾಸ್, ಪ್ರೊಫೆನೊಫಾಸ್ ಹಾಗೂ ಕ್ವಿನಾಲ್ಫಾಸ್ ಇವುಗಳಲ್ಲಿ ಯಾವುದಾದರೂ ಒಂದನ್ನು 2 ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.