ಶಿರಸಿ: ‘ಉತ್ತಮ ವಿಚಾರಧಾರೆ, ಸಕಾರಾತ್ಮಕ ಚಿಂತನೆಗಳ ಜತೆಗೆ ಧರ್ಮ ಹಾಗೂ ಪರಂಪರೆಯನ್ನು ಯುವಪೀಳಿಗೆಗೆ ರೂಢಿಸಬೇಕು. ಆ ಮೂಲಕ ಸದ್ಭಾವನೆಯ ಸಮಾಜ ನಿರ್ಮಾಣಗೊಳ್ಳಲಿ’ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
31ನೇ ಚಾತುರ್ಮಾಸ ವೃತ ಆರಂಭಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ‘ಶಿಕ್ಷಣದ ನೆಪದಲ್ಲಿ ಮಕ್ಕಳನ್ನು ಸಂಸ್ಕಾರದಿಂದ ದೂರ ಮಾಡುವ ಕೆಲಸ ಪಾಲಕರಿಂದ ಆಗಬಾರದು’ ಎಂದು ಹೇಳಿದರು.
‘ಹಳ್ಳಿಯ ವಾತಾವರಣದಲ್ಲಿ ಸಾಮೂಹಿಕವಾಗಿ ಹಬ್ಬಗಳ ಆಚರಣೆ ಬಹಳ ಕಡಿಮೆಯಾಗಿದೆ. ಇದರಿಂದ ಮನುಷ್ಯನ ಮನಸ್ಸು ವಿಕೃತವಾಗುತ್ತಿದೆ. ಸಾಮೂಹಿಕ ಹಬ್ಬಗಳ ಆಚರಣೆಯಿಂದ ಐಕ್ಯಭಾವ ಮೂಡುತ್ತದೆ’ ಎಂದರು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ, ‘ಧರ್ಮದ ಉಳಿವಿಗೆ ಋಷಿಮುನಿಗಳು, ಸಂತರ ಅನುಷ್ಠಾನ ಬಲ ಕಾರಣ’ ಎಂದರು.
ವಿಶ್ವೇಶ್ವರ ಭಟ್ಟ ಕೆರೆಕೈ ಅವರಿಗೆ ‘ಪುರೋಹಿತ ಶಿರೋಮಣಿ’, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್.ಹೆಗಡೆ ಭೈರುಂಬೆ ಅವರಿಗೆ ‘ಸಾಧಕ ಶಿರೋಮಣಿ’ ಬಿರುದು ನೀಡಿ ಸನ್ಮಾನಿಸಲಾಯಿತು.ರಾಮಾನುಭವ ಸಪ್ತಾಹ ತಾಳಮದ್ದಲೆ ಧ್ವನಿಮುದ್ರಿಕೆ ಬಿಡುಗಡೆಗೊಳಿಸಲಾಯಿತು.
ಮಂಡಳಿಯ ನಿರ್ದೇಶಕ ಸುಬ್ರಾಯ ಹೆಗಡೆ ಗೌರಿಬಣ್ಣಿಗೆ ಇದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಶಂಕರ ಭಟ್ಟ ಉಂಚಳ್ಳಿ, ವೇದಾ ಹೆಗಡೆ ನೀರ್ನಳ್ಳಿ, ನಾಗರಾಜ ಜೋಶಿ, ಆರ್.ಎನ್.ಭಟ್ಟ ಸುಗಾವಿ ಸಹಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.