ಕಾರವಾರ: ರಾಜ್ಯದಲ್ಲಿ ಖಾಸಗಿ ಮತ್ತು ಅರೆ ಖಾಸಗಿ ಕಂಪನಿಗಳಲ್ಲಿ ಮೂಲ ಕನ್ನಡಿಗರಿಗೆ ಶೇ 75ರಷ್ಟು ಮೀಸಲಿಡಬೇಕು ಎಂಬ ವಿಧೇಯಕವನ್ನು ಸರ್ಕಾರಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಮನವಿ ಸಲ್ಲಿಸಲಾಯಿತು.
‘ರಾಜ್ಯ ಸರ್ಕಾರವು ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ 75ರಷ್ಟು ಮೀಸಲಾತಿ ನೀಡುವ ವಿಧೇಯಕವನ್ನು ಮಂಡಿಸಲು ಮುಂದಾಯಿತಾದರೂ ಕೊನೆ ಕ್ಷಣದಲ್ಲಿ ಅದನ್ನು ವಾಪಸ್ ಪಡೆದಿದೆ. ಇದು ಖಂಡನೀಯವಾಗಿದೆ’ ಎಂದು ಕರವೇ ಕಾರ್ಯಕರ್ತರು ದೂರಿದರು.
‘ಕನ್ನಡ ನಾಡಿನ ನೆಲ, ಜಲ, ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಯುತ್ತಿರುವ ಉದ್ಯಮಗಳಲ್ಲಿ ಮೂಲ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಉನ್ನತ ಹುದ್ದೆಗಳಲ್ಲಿ ಶೇ 5ರಷ್ಟು ಮತ್ತು ಸಿ ಹಾಗೂ ಡಿ ದರ್ಜೆಯ ಹುದ್ದೆಗಳಲ್ಲಿ ಶೇ 100ರಷ್ಟು ಮೀಸಲಾತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಯ ಎಸ್.ಬಿ, ಉಪಾಧ್ಯಕ್ಷ ಲೋಕೇಶ ನಾಯ್ಕ, ಪ್ರಮುಖರಾದ ಮಂಜುನಾಥ ಪಂಥೋಜಿ, ಪ್ರವೀಣ ಕೊಠಾರಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.