ಶಿರಸಿ: ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ವಿವಿಧೆಡೆಗಳಲ್ಲಿ ಹಾನಿ ಸಂಭವಿಸಿದೆ. ಸೋಮವಾರ ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 74.2 ಮಿ.ಮೀ ದಾಖಲಾಗಿದೆ.
ಗಣೇಶನಗರದ ವೆಂಕಟೇಶ ವಾಮನ ನಾಯ್ಕ ಅವರ ಮನೆ ಗೋಡೆ ಕುಸಿದು ₹ 20ಸಾವಿರ, ಬದನಗೋಡಿನ ಗಜಾನನ ಶಿರೂರಕರ್ ಅವರ ಮನೆ ಭಾಗಶಃ ಕುಸಿದು ₹ 30ಸಾವಿರ, ಮಂಜುಗುಣಿಯ ಶ್ರೀನಿವಾಸ ನಾಯ್ಕ ಅವರ ಮನೆಗೆ ಹಾನಿಯಾಗಿ ₹ 30ಸಾವಿರ, ಹನುಮಂತಿಯ ಡುಮಿಂಗ್ ರೋಡ್ರಿಗಸ್ ಮನೆಯ ಗೋಡೆ ಕುಸಿದು₹ 13ಸಾವಿರ, ಯಡಳ್ಳಿಯ ಸರಸ್ವತಿ ನಾಯ್ಕ ಅವರ ಮನೆಯ ಗೋಡೆ ಭಾಗಶಃ ಕುಸಿದು ₹ 20ಸಾವಿರ ನಷ್ಟವಾಗಿದೆ.
ಶನಿವಾರ ರಾತ್ರಿಯಿಂದ ಮಳೆಯ ಜೊತೆಗೆ ಗಾಳಿ ಬೀಸುತ್ತಿದ್ದು, ಹಲವೆಡೆಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ. ನೆಗ್ಗು ಗ್ರಾಮ ಪಂಚಾಯ್ತಿಯ ಹಾಣಜಿಮನೆಯ ಬಳಿ ವಿದ್ಯುತ್ ತಂತಿಯ ಮೇಲೆ ಮರ ಮುರಿದು ಬಿದ್ದು, ವಿದ್ಯುತ್ ವ್ಯತ್ಯಯಗೊಂಡಿದೆ. ನಗರದ ದೇವಿಕೆರೆ ಮತ್ತು ಕೋಟೆಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ತಾಲ್ಲೂಕಿನಲ್ಲಿ ಈವರೆಗೆ 2069 ಮಿ.ಮೀ ಮಳೆ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.