
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತಾಪಿತ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳ ವಿರೋಧಿಸಿ ಪಶ್ಚಿಮ ಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮಗಳ ಕುರಿತು ನ. 23ರಂದು ನಗರದ ಟಿ.ಎಸ್.ಎಸ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
ಈ ಕುರಿತು ಬುಧವಾರ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರು ನಗರದ ಟಿ.ಎಸ್.ಎಸ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ‘ನದಿ ತಿರುವು ಯೋಜನೆ ವಿರೋಧಿಸಿ ಜಿಲ್ಲೆಯಾದ್ಯಂತ ಧ್ವನಿ ಹೊರ ಹೊಮ್ಮಬೇಕಿದೆ. ಸಂಘಟಿತರಾಗಿ ಹೋರಾಟ ಅನಿವಾರ್ಯವಾಗಿದೆ’ ಎಂದರು.
'ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ವಿಚಾರ ಸಂಕಿರಣವನ್ನು ನ.23 ರಂದು ಬೆಳಿಗ್ಗೆ 10.45 ಗಂಟೆಗೆ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸುವರು. ಪರಿಸರಶಾಸ್ತ್ರ ವಿಜ್ಞಾನಿ ಟಿ.ವಿ.ರಾಮಚಂದ್ರ, ನೀರಾವರಿ ತಜ್ಞ ರಾಜೇಂದ್ರ ಪೋದ್ದಾರ್, ಭೂಗರ್ಭಶಾಸ್ತ್ರಜ್ಞ ಶ್ರೀನಿವಾಸ ರೆಡ್ಡಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಉಪಸ್ಥಿತರಿರುವರು. ಸಂಜೆ 4.30 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗಂಗಾಧರೇಂದ್ರ ಸರಸ್ವತೀ ಸಾಮೀಜಿ ಸಾನ್ನಿಧ್ಯ ವಹಿಸುವರು. ಪರಿಸರ ಅರ್ಥಶಾಸ್ತ್ರಜ್ಞ ಬಿ.ಎಂ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು’ ಎಂದರು.
ಸುದ್ದಿಗೋಷ್ಠಿಯಲ್ಲಿ ಟಿ.ಎಸ್.ಎಸ್ ಉಪಾಧ್ಯಕ್ಷ ಎಂ.ಎನ್. ಭಟ್, ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ರತ್ನಾಕರ ಬಾಡಲಕೊಪ್ಪ, ವಿ.ಎಂ.ಹೆಗಡೆ ತ್ಯಾಗಲಿ, ಗಣಪತಿ ಬಿಸಲಕೊಪ್ಪ, ಶಿವಾನಂದ ಕಳವೆ, ಟಿ.ಎಸ್.ಎಸ್ ಮುಖ್ಯ ಕಾರ್ಯನಿರ್ವಾಹಕ ಗಿರೀಶ ಹೆಗಡೆ ಇದ್ದರು.
ಜಿಲ್ಲೆಯು ಬೃಹತ್ ಯೋಜನೆಯ ಧಾರಣಾ ಸಾಮರ್ಥ್ಯವಿಲ್ಲದಿದ್ದರೂ ನದಿ ತಿರುವು ಯೋಜನೆ ಮುನ್ನೆಲೆಗೆ ಬರುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಜನಾಂದೋಲನ ರೂಪುಗೊಳ್ಳಬೇಕು.– ಅನಂತ ಹೆಗಡೆ, ಅಶೀಸರ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ
ವಿಚಾರ ಸಂಕಿರಣದ ಗೋಷ್ಠಿಗಳು
ಪಶ್ಚಿಮ ಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮಗಳ ಕುರಿತು ವಿಚಾರ ಸಂಕಿರಣ ಗೋಷ್ಠಿಗಳು ನಡೆಯಲಿದೆ.
ಜಿಲ್ಲೆಯ ನದಿಕಣಿವೆ ಪರಿಸರದ ಮಹತ್ವದ ಕುರಿತು ಬೆಳಿಗ್ಗೆ 10 ರಿಂದ 10.45 ವರೆಗೆ ಟಿ.ವಿ.ರಾಮಚಂದ್ರ ದಿಕ್ಸೂಚಿ ಉಪನ್ಯಾಸ ನೀಡುವರು.
ಬಯಲುನಾಡಿನ ನೀರಾವರಿ ಯೋಜನೆಗಳ ಪ್ರಸಕ್ತ ಪರಿಸ್ಥಿತಿ ಕುರಿತು ಒಳನಾಡಿನ ನೀರಾವರಿ ತಜ್ಞ ರಾಜೇಂದ್ರ ಪೋದ್ದಾರ್, ನೈಸರ್ಗಿಕ ಅವಘಡಗಳು ಮತ್ತು ನಿಯಂತ್ರಣದ ಕುರಿತು ಭೂಗರ್ಭಶಾಸ್ತ್ರಜ್ಞ ಶ್ರೀನಿವಾಸ ರೆಡ್ಡಿ, ಎತ್ತಿನಹೊಳೆ ಯೋಜನೆ ಸ್ಥಳೀಯರ ಅನುಭವದ ಕುರಿತು ಪರಿಸರ ಹೋರಾಟಗಾರ ಕಿಶೋರಕುಕಾರ ಹೊಂಗಡಹಳ್ಳ, ಮಲೆನಾಡಿನ ಉಭಯವಾಸಿ ಜೀವಿ ಪರಿಸರದ ಮಹತ್ವದ ಕುರಿತು ವಿಜ್ಞಾನಿ ಅಮಿತ ಹೆಗಡೆ, ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತು ಗಿರೀಶ ಜನ್ನೆ, ಶರಾವತಿ ನದಿ ಕೆಳಹರಿವಿನ ಸಮಸ್ಯೆಗಳ ಕುರಿತು ಪ್ರಕಾಶ ಮೇಸ್ತ, ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ಕುರಿತು ಬಾಲಚಂದ್ರ, ಸಾಯಿಮನೆ ಬೇಡ್ತಿ-ವರದಾ ನದಿ ತಿರುವು ಯೋಜನೆ ಕುರಿತು ನರಸಿಂಹ ಹೆಗಡೆ, ವಾನಳ್ಳಿ ಕೇಣಿ ಬಂದರು ಯೋಜನೆ ಕುರಿತು ವಿಕಾಸ ತಾಂಡೇಲ, ಒಳನಾಡಿನ ಸುಸ್ಥಿರ ನೀರಾವರಿ ಕುರಿತು ಶಿವಾನಂದ ಕಳವೆ, ಕಾನೂನಿನ ದಾರಿಗಳ ಸಾಧ್ಯತೆ ಕುರಿತು ಗಿರಿಧರ ಕುಲಕರ್ಣಿ, ಬೆಳಗಾವಿ ಕೆ.ಎಮ್.ಹೆಗಡೆ ಭೈರುಂಬೆ ನೀರಾವರಿ ವರದಿ ಕುರಿತು ಜಿ.ವಿ.ಹೆಗಡೆ ಹುಳಗೋಳ ಉಪನ್ಯಾಸ ನೀಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.