ADVERTISEMENT

ನದಿ ಜೋಡಣೆ | ಸಮಾವೇಶ ಯಶಸ್ಸಿಗೆ ಸಾರ್ವಜನಿಕರ ಬೆಂಬಲ ಅಗತ್ಯ: ಸ್ವರ್ಣವಲ್ಲೀ ಶ್ರೀ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 8:08 IST
Last Updated 24 ಡಿಸೆಂಬರ್ 2025, 8:08 IST
ಶಿರಸಿ ನಗರದ ಪೂಗಭವನದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ವಿಶೇಷ ಸಭೆಯಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು
ಶಿರಸಿ ನಗರದ ಪೂಗಭವನದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ವಿಶೇಷ ಸಭೆಯಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು   

ಶಿರಸಿ: ನದಿ ಜೋಡಣೆ ವಿರೋಧಿಸಿ ನಗರದಲ್ಲಿ ಜ.11ರಂದು ನಡೆಯಲಿರುವ ಬೃಹತ್ ಜನಾಂದೋಲನ ಯಶಸ್ಸಿಗೆ ಸಾರ್ವಜನಿಕರು ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುವಂತೆ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು. 

ನಗರದ ಪೂಗಭವನದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಶ್ರೀಗಳು, ‘ನದಿ ಜೋಡಣೆಗೆ ಪ್ರಬಲ ವಿರೋಧ ವ್ಯಕ್ತಗೊಳಿಸುವುದು ಅನಿವಾರ್ಯ. ಹೀಗಾಗಿ ತನು, ಮನ, ಧನಗಳ ವಿಷಯದಲ್ಲಿ  ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದರು.

ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಅಘನಾಶಿನಿ- ಬೇಡ್ತಿ- ಶಾಲ್ಮಲಾ- ಪಟ್ಟಣದ ಹೊಳೆ ಕಣಿವೆ ಉಳಿಸಿ ಚಳವಳಿ ನಾಡಿನ ಎಲ್ಲೆಡೆ ಗಮನ ಸೆಳೆದಿದೆ. ಜ.11ರ ಸಮಾವೇಶದ ಧ್ವನಿ ದೆಹಲಿಗೂ ಕೇಳಿಸುವಂತೆ ಬೃಹತ್ ಜಾಗೃತಿ ಅಭಿಯಾನ ನಡೆಸಬೇಕು’ ಎಂದು ಕಣಿವೆಗಳ ಜನತೆಗೆ ಮನವಿ ಮಾಡಿದರು.

ADVERTISEMENT

ಇದೇ ವೇಳೆ ವಿವಿಧ ಮಠಗಳ ಸಂತರು, ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗಡೆ, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ತಜ್ಞರ ಪಾಲ್ಗೊಳ್ಳುವಿಕೆಯ ಸಮಾವೇಶದ ವ್ಯಾಪಕ ವ್ಯವಸ್ಥೆಗೆ ಶಿರಸಿ ನಗರದ ಗಣ್ಯರ ಸಂಚಲನಾ ಸಮಿತಿ ರಚಿಸಲಾಯಿತು. ಶಿರಸಿ ಹಾಗೂ ಸುತ್ತಲಿನ ಮಹಿಳಾ ಸಂಘ– ಸಂಸ್ಥೆಗಳ ಸಭೆಯನ್ನು ನಡೆಸಿ ಮನೆ ಮನೆಗೆ ಸಂದೇಶ ತಲುಪಿಸಬೇಕು. ವಿವಿಧ ಜಾತಿ ಸಮುದಾಯಗಳ ಪ್ರಮುಖರ ಸಭೆಯನ್ನು ಡಿ.27ರಂದು ಏರ್ಪಡಿಸಬೇಕು ಎಂದು ನಿರ್ಧರಿಸುವ ಜತೆ, ಸಹಕಾರ ಸಂಸ್ಥೆಗಳ ಬೆಂಬಲ ಪಡೆಯಲಾಯಿತು. 

ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸತೀಶ ಭಟ್ ಸ್ವಾಗತಿಸಿದರು. ಶ್ಯಾಮಸುಂದರ ಭಟ್ ಪ್ರಾಸ್ತಾವಿಕ ಮಾತನಾಡಿದರು. ಲೋಕೇಶ ಹೆಗಡೆ ನಿರ್ವಹಿಸಿದರು. ಹುಳಗೋಳ ಅನಂತ ವಂದಿಸಿದರು.

ಬೃಹತ್ ಜನಾಂದೋಲನದ ಪೂರ್ವಭಾವಿಯಾಗಿ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ನದಿ ಜೋಡಣೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಬೇಕು
ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ
ವಿವಿಧ ಕಾರ್ಯಕ್ರಮ ಆಯೋಜನೆ
ಡಿ.29ರಂದು ಸಿದ್ಧಾಪುರದಲ್ಲಿ ಎಲ್ಲ ಸಹಕಾರಿಗಳ ಸಭೆ ನಡೆಯಲಿದೆ. ಇದರ ಜತೆ ಹೆಗ್ಗರಣಿಯಲ್ಲಿ ತಯಾರಿ ಸಭೆಗಳು ನಡೆಯಲಿವೆ. ಗ್ರಾಮೀಣ ಪ್ರದೇಶದ ಮನೆ ಮನೆಗೆ ಕರಪತ್ರ ವಿತರಣೆ  ಆಗಲಿದೆ. ವಿವಿಧ ಧಾರ್ಮಿಕ ಮುಖಂಡರ ಭೇಟಿ ಮಾಡಿ ಆಹ್ವಾನದ ಜತೆಗೆ ಕುಮಟಾದಲ್ಲಿ ಜ.1ರಂದು ಅಘನಾಶಿನಿ ಜಾಗೃತಿ ಸಭೆ ನಡೆಸಲಾಗುವುದು. ಅಂಕೋಲಾದ ಕಲ್ಲೇಶ್ವರದಲ್ಲಿ ಸಭೆ ನಡೆಸುವ ಜತೆ ಶಿರಸಿ ಉಪವಿಭಾಗಾಧಿಕಾರಿ ಅರಣ್ಯ ಕಚೇರಿಗೆ ಸದ್ಯದಲ್ಲೆ ಬೇಡ್ತಿ ನಿಯೋಗ ಭೇಟಿ ನೀಡಲಿದೆ ಎಂದು ಪ್ರಮುಖರು ಸಭೆಗೆ ತಿಳಿಸಿದರು. ಇದೇ ವೇಳೆ ಸಾಮಾಜಿಕ ಮಾಧ್ಯಮದ ಮೂಲಕ ಬೇಡ್ತಿ– ಅಘನಾಶಿನಿ ಜಾಗೃತಿ ಮೂಡಿಸಲು ಜವಾಬ್ದಾರಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.