ADVERTISEMENT

ಬೇಡ್ತಿ ಸೇತುವೆ ಸಂಪರ್ಕ ರಸ್ತೆಯಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:46 IST
Last Updated 18 ಜೂನ್ 2021, 16:46 IST
ಯಲ್ಲಾಪುರದ ಶಿರಸಿ ರಸ್ತೆಯಲ್ಲಿ ಬೇಡ್ತಿ ಸೇತುವೆಯ ಸಂಪರ್ಕ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು
ಯಲ್ಲಾಪುರದ ಶಿರಸಿ ರಸ್ತೆಯಲ್ಲಿ ಬೇಡ್ತಿ ಸೇತುವೆಯ ಸಂಪರ್ಕ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು   

ಯಲ್ಲಾಪುರ: ತಾಲ್ಲೂಕಿನ ಶಿರಸಿ ರಸ್ತೆಯಲ್ಲಿ ಬೇಡ್ತಿ ನದಿಗೆ ನೂತನವಾಗಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮಳೆಗಾಲದಲ್ಲಿ ನೀರು ತುಂಬಿ ಹರಿಯದಂತೆ ಬೇಡ್ತಿ ಸೇತುವೆಯನ್ನು ಎತ್ತರವಾಗಿ ನಿರ್ಮಿಸಲಾಗಿದೆ. ಸುಮಾರು 15 ಅಡಿ ಮಣ್ಣು, ಕಲ್ಲು ತುಂಬಿ ಸಂಪರ್ಕ ರಸ್ತೆ ನಿರ್ಮಿಸಲಾಗಿತ್ತು. ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮಣ್ಣು ಕುಸಿದಿದ್ದು, ರಸ್ತೆಯ ಒಂದು ಬದಿಯಲ್ಲಿ ಬಿರುಕು ಬಿಟ್ಟಿದೆ. ಮಳೆಯ ನೀರು ಈ ಬಿರುಕಿನಲ್ಲಿ ಹೋಗಿ ಬಿರುಕು ಇನ್ನಷ್ಟು ಅಗಲವಾಗುವ ಆತಂಕ ಎದುರಾಗಿದೆ.

ಈಗ ಒಂದು ಬದಿಯಲ್ಲಿ ಮಾತ್ರ ಸುಮಾರು 15 ಅಡಿಗಳಷ್ಟು ಬಿರುಕು ಕಾಣಿಸಿಕೊಂಡಿದ್ದೆ. ಇಲ್ಲಿನ ಮಣ್ಣು ಕುಸಿದರೆ ರಸ್ತೆ ಬದಿಗೆ ಹಾಕಿದ್ದ ರಕ್ಷಣಾ ಗೋಡೆಗೆ (ರೇಲಿಂಗ್ಸ್) ಹಾನಿಯಾಗಬಹುದು. ಬಿರುಕು ರಸ್ತೆಯ ಮಧ್ಯಕ್ಕೆ ಮುಂದುವರಿದರೆ ವಾಹನ ಸಂಚಾರಕ್ಕೆ ತೊಂದರೆಯಾಗಬಹುದು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ವಿನಾಯಕ ಹೆಗಡೆ, ‘
ಸಂಪರ್ಕ ರಸ್ತೆಗೆ ಕನಿಷ್ಠ 15 ಅಡಿ ಮಣ್ಣು ಕಲ್ಲು ತುಂಬಿ ನಿರ್ಮಿಸಲಾಗಿದೆ. ರಸ್ತೆ 30 ಅಡಿ ಅಗಲವಿದೆ. ಹಾಗಾಗಿ ಯಾವುದೇ ಅಪಾಯವಿಲ್ಲ. ಮೊದಲ ಮಳೆಗೆ ಹಾಕಿದ ಮಣ್ಣು ಈ ರೀತಿ ಸಡಿಲಗೊಂಡು ಸ್ವಲ್ಪ ಮಟ್ಟಿಗೆ ಬಿರುಕು ಬಿಡುವುದು ಸಾಮಾನ್ಯ. ಒಂದು ಮಳೆಗಾಲ ಕಳೆದ ನಂತರ ಮಣ್ಣು ಗಟ್ಟಿಯಾಗುತ್ತದೆ. ನಂತರ ಕಲ್ಲಿನ ಪಿಚ್ಚಿಂಗ್ ನಿರ್ಮಿಸಲಾಗುವುದು. ಬಿರುಕು ಬಿಟ್ಟ ಸ್ಥಳದಲ್ಲಿ ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.