ಕಾರವಾರ: ನಗರದ ಹೈಚರ್ಚ್ ಸಮೀಪ ಗುಡ್ಡದ ಮೇಲೆ ನಿರ್ಮಾಣ ಮಾಡಲಾಗಿರುವ ಟ್ಯಾಂಕ್ಗೆ ತೆರಳುವ ರಸ್ತೆಯ ಇಂಟರ್ಲಾಕ್ ಹಾಗೂ ಸಿಮೆಂಟ್, ಈ ಕಾಮಗಾರಿ ನಡೆದು ಒಂದೇ ತಿಂಗಳಲ್ಲಿಕಿತ್ತುಹೋಗಿದೆ.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಈ ಗುಡ್ಡದ ಮೇಲೆ ಬೃಹತ್ ಟ್ಯಾಂಕ್ ನಿರ್ಮಿಸಿದೆ. ಇಲ್ಲಿಂದ ಇಡೀ ಕಾರವಾರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ. ಇದರ ಬಳಿಗೆ ತೆರಳಲು ನಿರ್ಮಿಸಲಾದ ಸುಮಾರು 500 ಮೀಟರ್ ಉದ್ದದ ರಸ್ತೆಗೆ ₹ 14.5 ಲಕ್ಷ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಸಲಾಗಿದೆ. ಇದಕ್ಕಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮೂರು ಪ್ರತ್ಯೇಕ ಟೆಂಡರ್ಗಳನ್ನುಕರೆದು ಮೇ ತಿಂಗಳಿನ ಮಧ್ಯಭಾಗ ಮತ್ತು ಜೂನ್ ಆರಂಭದಲ್ಲಿ ಕಾಮಗಾರಿ ಹಮ್ಮಿಕೊಂಡಿತ್ತು.
ರಸ್ತೆಯ ಹಲವು ಕಡೆ ಇಂಟರ್ಲಾಕ್ಗಳು ತುಂಡಾಗಿದ್ದು, ಪಟ್ಟಿಗಳಿಗೆ ಹಾಕಿದ್ದ ಸಿಮೆಂಟ್ ಕಿತ್ತುಬಂದಿದೆ. ಈ ಕಾಮಗಾರಿ ಗುಣಮಟ್ಟವಿಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ಅವರ ಆರೋಪ.
‘ಕಳಪೆ ಕಾಮಗಾರಿಯಿಂದಾಗಿ ರಸ್ತೆಯು ಒಂದೇ ತಿಂಗಳಲ್ಲಿ ಈ ರೀತಿ ಹಾಳಾಗಿದೆ. ಈ ರಸ್ತೆಯಲ್ಲಿ ದೊಡ್ಡ ವಾಹನಗಳ ಓಡಾಟ ಇನ್ನೂ ಶುರುವಾಗಿಲ್ಲ. ಆದರೂ ಇಂಟರ್ಲಾಕ್ಗಳು ತುಂಡಾಗಿವೆ. ಸಮತಟ್ಟಾಗಿ ಇರುವ ಬದಲು ಹಲವು ಕಡೆ ಮೇಲೆ ಕೆಳಗೆ ನಿಂತಿವೆ. ಚರಂಡಿಯನ್ನು ‘L’ ಆಕಾರದಲ್ಲಿ ನಿರ್ಮಿಸಲಾಗಿದೆ. ಗುಡ್ಡದ ಮೇಲಿನಿಂದ ರಭಸವಾಗಿ ಹರಿಯುವ ಮಳೆ ನೀರಿನ ಹೊಡೆತಕ್ಕೆ ಚರಂಡಿಯ ಸಿಮೆಂಟ್ ನಿಲ್ಲುವುದಾದರೂ ಹೇಗೆ? ಈ ಕಾಮಗಾರಿಗಳ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಗುಡ್ಡದ ಪ್ರದೇಶವಾಗಿರುವ ಕಾರಣ ಮಣ್ಣು ಕುಸಿಯುತ್ತಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸುತ್ತಾರೆ. ಆದರೆ, ಸಿಮೆಂಟ್ ಇಷ್ಟು ಬೇಗ ಹೇಗೆ ಪುಡಿಯಾಗಿ ಹೋಗಲು ಸಾಧ್ಯ ಎಂಬುದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.