ರಾಮಚಂದ್ರ ಭಟ್ಟ ಹಾಗೂ ಸಂಗಡಿಗರು ಜೇನು ಸಂತತಿ ರಕ್ಷಣೆ ಕಾರ್ಯಾಚರಣೆಯಲ್ಲಿ ತೊಡಗಿರುವುದು
ಯಲ್ಲಾಪುರ: ತಾಲ್ಲೂಕಿನ ಚಂದಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಸೂರು ಗ್ರಾಮದ ರಾಮಚಂದ್ರ ಗೋಪಾಲ ಭಟ್ಟ ಜೇನುಹುಳದ ಸಂತತಿ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಿಶ್ರಿ (ಮುಜಂಟಿ) ಮತ್ತು ತುಡುವೆ ಜೇನನ್ನು ಮನೆಯಲ್ಲಿ ಸಾಕಿರುವ ಇವರು ವೈಜ್ಞಾನಿಕ ಹೆಜ್ಜೇನು ಕೊಯ್ಲ ತರಬೇತಿ ನೀಡುತ್ತಾರೆ. ಕಟ್ಟಡದ ಮೇಲೆ ಕೂರುವ ಜೇನುಹುಳಗಳನ್ನು ಚೀಲದಲ್ಲಿ ಹಿಡಿದು ಕಾಡಿಗೆ ಬಿಡುವ ಮೂಲಕ ಸಂತತಿ ರಕ್ಷಿಸುತ್ತಾರೆ.
ಭಟ್ರೆ ಜೇನು ಬಂದಿದೆ. ಬನ್ನಿ ಅಂದರೆ ಈ 62ರ ಇಳಿವಯಸ್ಸಿನಲ್ಲೂ ಕರೆದಲ್ಲಿ ಹೋಗಿ ಜೇನು ತೆಗೆದುಕೊಟ್ಟು ಬರುತ್ತಾರೆ. ಒಟ್ಟಾರೆ ಇವರ ಜೀವನವೇ ಜೇನುಮಯವಾಗಿದೆ.
‘ಬಾಲ್ಯದಿಂದಲೂ ನನಗೆ ಜೇನಿನ ಕುರಿತು ಅದಾವುದೋ ಮೋಹ. 10-12 ವರ್ಷದವನಿರುವಾಗಲೇ ಕಾಡಿನಲ್ಲಿ ಜೇನಿನ ಸಂಗಕ್ಕೆ ಬಿದ್ದೆ. ಮನೆಯಲ್ಲಿ ಜೇನು ಸಾಕಣೆ ಆರಂಭಿಸಿದೆ. ಜೇನುಹುಳ ಪರಾಗ ಸ್ಪರ್ಶದ ಮೂಲಕ ರೈತನ ಮಿತ್ರನಾಗಿ ಕೆಲಸ ಮಾಡುತ್ತದೆ. ಜೇನು ಸಾಕುವುದರಿಂದ ಅಡಿಕೆ ತೋಟದಲ್ಲಿ ಉತ್ತಮ ಬೆಳೆ ಬರುತ್ತದೆ ಎನ್ನುವುದನ್ನು ಕಂಡುಕೊಂಡೆ. ಇದು ಹೆಚ್ಚಿನ ಜೇನು ಸಾಕಣೆಗೆ ನನಗೆ ಸ್ಫೂರ್ತಿ ನೀಡಿತು. ಮನೆಯ ಸುತ್ತ ಮುತ್ತ ಜೇನಿನ ಪೆಟ್ಟಿಗೆ ಇಟ್ಟೆ. ಇತರರಿಗೂ ಅನುಕೂಲವಾಗಲಿ ಅಂದುಕೊಂಡು ಬೇರೆಯವರಿಗೂ ಜೇನು ಸಾಕುವಂತೆ ಹೇಳತೊಡಗಿದೆ ಎನ್ನುತ್ತಾರೆ ರಾಮಚಂದ್ರ ಭಟ್ಟ.
ಭಾರತದಲ್ಲಿ ಜೇನು ನೊಣಗಳಿಂದ ಉಂಟಾಗಬಹುದಾದ ಪರಾಗಸ್ಪರ್ಶದ ಕೊರತೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ವಾಷಿ೯ಕ ಸುಮಾರು ₹ 4 ಸಾವಿರ ಕೋಟಿಗಳಷ್ಟು ಹಾನಿಯಾಗುತ್ತಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಅಂಶ ಗಮನಿಸಿದರೆ ಜೇನು ಹುಳದ ಸಾಕಣೆಯ ಮಹತ್ವ ಅರಿವಿಗೆ ಬರುತ್ತದೆ.
ರೈತರ ಇತರ ಉಪಕಸುಬುಗಳಿಗೆ ಹೋಲಿಸಿದರೆ ಜೇನು ಸಾಕಣೆ ಸುಲಭ ಮತ್ತು ಪ್ರಯೋಜನಕಾರಿ. ಕೃಷಿಕರು ಜೇನು ಸಾಕಣೆಯಿಂದ ಹೆಚ್ಚು ಲಾಭ ಪಡೆಯಬಹುದು. ಕೃಷಿಯಲ್ಲಿ ತೊಡಗಿರುವ ಯುವಕರು ಜೇನು ಸಾಕಬೇಕು. ಇದರಿಂದ ಇಳುವರಿ ಹೆಚ್ಚುವುದಲ್ಲದೆ ಉಪ ಆದಾಯವೂ ಆಗುತ್ತದೆ’ ಎನ್ನವುದು ಅವರ ಖಚಿತ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.