ADVERTISEMENT

‘ಸಾಗರಮಾಲಾ’ ವಿರೋಧಿಸಿ ಮುಂದುವರಿದ ಆಕ್ರೋಶ: ಎರಡನೇ ದಿನವೂ ಪ್ರತಿಭಟನೆಯ ಕಾವು

ಜನವರಿ 16ರಂದು ಕಾರವಾರ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 13:29 IST
Last Updated 14 ಜನವರಿ 2020, 13:29 IST
ಕಾರವಾರದಲ್ಲಿ ‘ಸಾಗರಮಾಲಾ’ ಯೋಜನೆಯ ಕಾಮಗಾರಿ ವಿರುದ್ಧ ಮೀನುಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು
ಕಾರವಾರದಲ್ಲಿ ‘ಸಾಗರಮಾಲಾ’ ಯೋಜನೆಯ ಕಾಮಗಾರಿ ವಿರುದ್ಧ ಮೀನುಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು   

ಕಾರವಾರ: ತೀವ್ರ ವಿರೋಧದ ನಡುವೆಯೂ ಪ್ರಾರಂಭಗೊಂಡಿರುವ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿ ವಿರುದ್ಧ ಆಕ್ರೋಶಗೊಂಡ ಮೀನುಗಾರರ ಪ್ರತಿಭಟನೆಯು ಮಂಗಳವಾರವೂ ಮುಂದುವರಿಯಿತು.

‘ಸಾಗರಮಾಲಾ’ ಯೋಜನೆಯಡಿಯಲ್ಲಿ ಬಂದರು ವಿಸ್ತರಣೆಯ ಭಾಗವಾದ ಈ ಕಾಮಗಾರಿಗೆ ಸ್ಥಳೀಯರು ಹಾಗೂ ಮೀನುಗಾರರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರ ಇಡೀ ದಿನ ಪ್ರತಿಭಟನೆ, ಅಂಗಡಿ ಮುಂಗಟ್ಟುಗಳ ಬಂದ್‌ನಿಂದ ಸ್ತಬ್ಧವಾಗಿದ್ದನಗರದಲ್ಲಿ ಎರಡನೇ ದಿನವೂ ಪ್ರತಿಭಟನೆ ನಡೆಯಿತು. ನಗರದಲ್ಲಿ ಜನಜೀವನ ಎಂದಿನಂತಿತ್ತು.

ಕಾಮಗಾರಿಯ ಸ್ಥಳದಲ್ಲಿಸೇರಿದನೂರಾರು ಪ್ರತಿಭಟನಾಕಾರರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಇಡ್ಲಿ ಸಾಂಬಾರ್ ಅಚ್ಛಾ ಹೈ, ಬಿಜೆಪಿ ಸರ್ಕಾರ್ ಲುಚ್ಛಾ ಹೈ’ ಎಂಬ ಘೋಷಣೆಯೊಂದಿಗೆ ತಮ್ಮ ಸಿಟ್ಟನ್ನು ಹೊರಹಾಕಿದರು. ತಮ್ಮ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಟೀಕಾಪ್ರಹಾರ ಮಾಡಿದರು.

ADVERTISEMENT

‘ಪ್ರತಿಭಟನೆಗೆ ಇಳಿದವರ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ್ದಾರೆ.ನ್ಯಾಯಕ್ಕಾಗಿ ಹೋರಾಟ ಮಾಡಿದವರನ್ನುಬಂಧಿಸಿದ್ದಾರೆ. ನಮ್ಮ ಪ್ರಾಣ ಹೋದರೂ ಸರಿ, ಕಾರವಾರದ ಜನತೆಗೆ ಅನ್ಯಾಯವೆಸಗುವ ಈ ಕಾಮಗಾರಿ ನಡೆಯುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಮ್ಮ ಕಷ್ಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

‘ಮೀನುಗಾರಿಕೆಯನ್ನೇ ನಂಬಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ, ಯಾರದೋ ಲಾಭಕ್ಕಾಗಿ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಬಡ ಮೀನುಗಾರರಬದುಕನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಅಸ್ತಿತ್ವಕ್ಕಾಗಿಒಗ್ಗಟ್ಟಿಂದನಾವು ಹೋರಾಡುತ್ತೇವೆ’ ಎಂದು ಪ್ರತಿಭಟನಾ ನಿರತ ಮಹಿಳೆಯರು ಆವೇಶದಿಂದ ಹೇಳಿದರು.

ಮಾರುಕಟ್ಟೆ ಬಂದ್: ನಗರದ ಮೀನು ಮಾರುಕಟ್ಟೆ ಸತತ ಎರಡನೇ ದಿನವೂ ಮುಚ್ಚಿತ್ತು. ಇದರಿಂದ ಮೀನು ಖರೀದಿಗೆ ಬಂದವರು ನಿರಾಸೆಯಿಂದ ತೆರಳಿದರು.

ಭಾವಚಿತ್ರಗಳಿಗೆ ಚಪ್ಪಲಿಹಾರ:ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರ ಭಾವಚಿತ್ರಗಳಿಗೆಸೆಗಣಿ ಎರಚಿ, ಚಪ್ಪಲಿಯಿಂದ ಹೊಡೆದರು. ಬಳಿಕ ಚಪ್ಪಲಿಯ ಹಾರ ಹಾಕಿದರು.

ಮುಂದುವರಿದಧರಣಿ:ಕಾಮಗಾರಿ ನಡೆಯುವ ಜಾಗದಲ್ಲಿ ಪ್ರತಿಭಟನೆ ನಡೆಸಿದ ನಂತರ ಮೀನುಗಾರರು ಜಿಲ್ಲಾಧಿಕಾರಿ ಕಚೇರಿಬಳಿಧರಣಿ ಕುಳಿತರು. ಶಾಸಕಿ ಮತ್ತು ಸಂಸದರ ಭಾವಚಿತ್ರಗಳನ್ನು ಸಂಕಲನ (ಎಡಿಟಿಂಗ್) ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ 12ರಸುಮಾರಿಗೆ ಶುರುವಾದ ಧರಣಿಯು ಸಂಜೆಯವರೆಗೂ ಮುಂದುವರಿಯಿತು. ಬುಧವಾರವೂ ಪ್ರತಿಭಟಿಸಲಾಗುವುದುಎಂದು ಮೀನುಗಾರರ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.