ಕಾರವಾರ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ.
ಇಲ್ಲಿನ ವಾಣಿಜ್ಯ ಬಂದರು, ಕದ್ರಾ ಸೇರಿದಂತೆ ಕಾಳಿ ನದಿಯ ಐದು ಅಣೆಕಟ್ಟೆಗಳು, ವಿದ್ಯುದಾಗಾರಗಳು, ಕೈಗಾ ಅಣು ವಿದ್ಯುತ್ ಸ್ಥಾವರ ಸೇರಿದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮೀನುಗಾರಿಕಾ ಬಂದರುಗಳ ಮೇಲೆ ಪೊಲೀಸ್ ಇಲಾಖೆ ಮತ್ತು ಕರಾವಳಿ ಕಾವಲು ಪಡೆ ಕಣ್ಗಾವಲು ಇರಿಸಿವೆ.
ವಾಣಿಜ್ಯ ಬಂದರಿನ ಹಡಗು ಕಟ್ಟೆ ಬಳಕೆ ಮಾಡಿಕೊಳ್ಳುತ್ತಿರುವ ಭಾರತೀಯ ತಟರಕ್ಷಕ ಪಡೆಯು ಹಡಗುಕಟ್ಟೆಯಲ್ಲಿ ಸೇನಾ ಕಾವಲು ಇರಿಸಿದೆ. ಶಸ್ತ್ರಸಜ್ಜಿತವಾಗಿರುವ ಸಿಬ್ಬಂದಿ ಇಲ್ಲಿ ನಿರಂತರ ಗಸ್ತು ತಿರುಗುತ್ತಿದ್ದಾರೆ. ಬಂದರಿನ ಪ್ರವೇಶದ್ವಾರದಲ್ಲಿಯೂ ಭದ್ರತ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ.
‘ಪ್ರಮುಖ ಯೋಜನೆಗಳಿರುವ ಜಿಲ್ಲೆಯಲ್ಲಿ ಯೋಜನಾ ಪ್ರದೇಶಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಅಣೆಕಟ್ಟೆಗಳಿಗೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಭದ್ರತೆ ವ್ಯವಸ್ಥೆ ಕಲ್ಪಿಸಿಕೊಂಡಿದ್ದು, ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗುತ್ತಿದೆ. ಭಾರಿ ಭದ್ರತೆಯೊಂದಿಗೆ ಇರುವ ಕೈಗಾ ಅಣುಸ್ಥಾವರದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್ಎಫ್) ಇನ್ನಷ್ಟು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.
‘ಕಡಲತೀರದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಮೀನುಗಾರಿಕೆ ದೋಣಿಗಳಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ, ಸ್ಥಳೀಯ ಕಾರ್ಮಿಕರ ಮಾಹಿತಿ ಕಲೆಹಾಕಲಾಗುತ್ತಿದೆ. ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಮೀನುಗಾರಿಕೆ ಮುಗಿಸಿ ಬಂದರಿಗೆ ಬರುವ ವೇಳೆ ತಪಾಸಣೆ ನಡೆಸಿಯೇ ದೋಣಿ ಒಳಗೆ ಬಿಡಲಾಗುತ್ತದೆ’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.