ಹೊನ್ನಾವರ: ‘ಕಡಿಮೆ ಪ್ರಮಾಣದ ನೀರು, ಭೂಮಿ ಹಾಗೂ ಅರಣ್ಯ ಪ್ರದೇಶ ಉಪಯೋಗಿಸಿಕೊಂಡು ಜಾರಿಗೆ ತರಲಾಗುತ್ತಿರುವ ಶರಾವತಿ ಭೂಗತ ವಿದ್ಯುತ್ ಯೋಜನೆ ಕುರಿತು ಪರಿಸರವಾದಿಗಳು, ಸ್ಥಳೀಯರು ಹಾಗೂ ಹೋರಾಟಗಾರರು ಆತಂಕಪಡುವ ಅಗತ್ಯವಿಲ್ಲ’ ಎಂದು ಕೆಪಿಸಿ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ ವಿ.ಎಂ.ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯ ಕುರಿತು ಪರಿಸರವಾದಿಗಳು ಹಾಗೂ ಸ್ಥಳೀಯ ಹೋರಾಟಗಾರರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದರು.
‘ಅತಿ ಕಡಿಮೆ ಪ್ರಮಾಣದ ಪರಿಸರ ಹಾನಿಯೊಂದಿಗೆ ಕಾರ್ಯರೂಪಕ್ಕೆ ಬರುವ, ರಾಜ್ಯದ ವಿದ್ಯುತ್ ಪೂರೈಕೆಗೆ ಅನಿವಾರ್ಯವಾಗಿರುವ ಪ್ರಸ್ತುತ ಯೋಜನೆ ಅತಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದರು.
ಕೇಂದ್ರ ಸರ್ಕಾರದ 13 ಸ್ವತಂತ್ರ ಇಲಾಖೆ ಹಾಗೂ ನಿರ್ದೇಶನಾಲಯಗಳು ಪ್ರಸ್ತುತ ಯೋಜನೆಗೆ ಒಪ್ಪಿಗೆ ನೀಡಿವೆ. ಸುರಂಗ ಮಾರ್ಗದ ಮೂಲಕ ನೀರನ್ನು ಎತ್ತಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ 54.155 ಹೆಕ್ಟೇರ್ ಅರಣ್ಯ ಪ್ರದೇಶ ಸೇರಿದಂತೆ ಕೇವಲ 100.645 ಹೆಕ್ಟೇರ್ ಭೂಮಿಯನ್ನು ಮಾತ್ರ ಬಳಸಿಕೊಳ್ಳಲಾಗುವುದು. ಅಗತ್ಯ ವಸ್ತುಗಳ ಸಾಗಣೆಗೆ ಪ್ರಸ್ತುತ ಇರುವ 3.5 ಮೀ ಅಗಲದ ರಸ್ತೆಯನ್ನು 5.5 ಮೀ ಗೆ ಸೀಮಿತವಾಗಿ ವಿಸ್ತರಿಸಲಾಗುವುದು’ ಎಂದು ಹೇಳಿದರು.
‘ಯೋಜನೆಗೆ ಸುರಂಗ ನಿರ್ಮಾಣದಿಂದ ಭೂಕುಸಿತವಾಗುವುದಿಲ್ಲ ಎಂದು ಕೇಂದ್ರ ಭೂಸರ್ವೇಕ್ಷಣಾ ಇಲಾಖೆ ತಿಳಿಸಿದೆ. ಯೋಜನೆ ಜಾರಿ ಪ್ರದೇಶದಲ್ಲಿರುವ ಅಪರೂಪದ ಸಿಂಗಳೀಕಗಳ ಸಂಚಾರಕ್ಕೆ ತೊಂದರೆಯಾಗದಂತೆ ಮೇಲ್ಸೇತುವೆ ನಿರ್ಮಿಸಲಾಗುವುದು. ಯೋಜನೆಗೆ 50-60 ವರ್ಷಗಳ ಅವಧಿಯಲ್ಲಿ ಕೇವಲ 0.37 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳುವುದರಿಂದ ಜನರ ಬಳಕೆಗಾಗಲಿ ಅಥವಾ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣದಲ್ಲಾಗಲಿ ಕೊರತೆ ಉಂಟಾಗುವುದಿಲ್ಲ’ ಎಂದು ತಿಳಿಸಿದರು.
‘ಉತ್ಪಾದಿತ ವಿದ್ಯುತ್ ಸರಬರಾಜಿಗೆ ಹೊಸ ಮಾರ್ಗ ನಿರ್ಮಿಸದೆ ಪ್ರಸ್ತುತ ಇರುವ ಗ್ರಿಡ್ ಉಪಯೋಗಿಸಿಕೊಳ್ಳಲಾಗುವುದು. ಜಿಲ್ಲಾಧಿಕಾರಿ ಕಚೇರಿ, ಪಂಚಾಯಿತಿ ಕಾರ್ಯಾಲಯ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್ಸೈಟ್ನಲ್ಲಿ ಯೋಜನೆ ಕುರಿತು ಸಮರ್ಪಕ ವಿವರಗಳುಳ್ಳ ಮಾಹಿತಿ ಲಭ್ಯವಿದೆ’ ಎಂದು ತಿಳಿಸಿದರು.
ಶರಾವತಿ ಯೋಜನೆ ಮುಖ್ಯ ಎಂಜಿನಿಯರ್ ರಮೇಶ, ಕಾಮಗಾರಿ ಮುಖ್ಯ ಎಂಜಿನಿಯರ್ ಮಾದೇಶ, ಕಾರ್ಗಲ್ ಕಾರ್ಯಪಾಲಕ ಎಂಜಿನಿಯರ್ ಉಮಾಪತಿ ಕೆ.ಆರ್, ಹಾಗೂ ಗೇರುಸೊಪ್ಪ ಕಾಮಗಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ ಎಸ್.ಎಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.