ADVERTISEMENT

ಶಿರಸಿ | ಆರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ

ಬಿಜೆಪಿ ಮುಖಂಡನ ಮೇಲೆ ಹಲ್ಲೆ ಹಾಗೂ ಯುವಕನ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:21 IST
Last Updated 5 ಫೆಬ್ರುವರಿ 2026, 6:21 IST
   

ಶಿರಸಿ: ನಗರದಲ್ಲಿ ನಡೆದಿದ್ದ ಬಿಜೆಪಿ ಮುಖಂಡನ ಕೊಲೆ ಯತ್ನ ಹಾಗೂ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಆರು ಮಂದಿ ಆರೋಪಿಗಳಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

2019ರ ಏಪ್ರಿಲ್ 23ರಂದು ರಾತ್ರಿ 10.30ರ ಸುಮಾರಿಗೆ ನಗರದ ಕಸ್ತೂರಬಾನಗರದ ಕರಿಗುಂಡಿ ರಸ್ತೆಯಲ್ಲಿ ಅಂದಿನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅನೀಶ ತಹಶಿಲ್ದಾರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಅನೀಶ್ ಅವರು ಗಾಯಗೊಂಡು ಪಾರಾಗಿದ್ದರು. ಆದರೆ, ಇದೇ ವೇಳೆ ಆರೋಪಿಗಳು ಅಸ್ಲಂ ಸೈಯದ್‌ ಬಾಬಾಜಾನ್ ಎಂಬಾತನನ್ನು ಹತ್ಯೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಕೊಲೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಆರೋಪಿಗಳಾದ ಕಸ್ತೂರಬಾನಗರದ ಮೊಹಮ್ಮದ್ ಫಾರೂಕ್ ಮಹಮದ್ ಶಫಿವುಲ್ಲಾ (32), ಮೊಹಮ್ಮದ್ ಸಲೀಂ ಅಬ್ದುಲ್ ರಹೀಮ್ (36), ಸರ್ಫ್ರಾಜ್ ಪಟೇಲ್ ಸಾಬ್ ಪಟೇಲ್ (35), ನೆಹರುನಗರದ ಮಹಮದ್ ಆರಿಫ್ ದಾವಲ್ ಸಾಬ್ ಕರ್ಜಗಿ (34), ನಿಸಾರ್ ಅಹಮದ್ ಶೇಖ್ ಕಾಸಿಂಸಾಬ್ ಶೇಖ್ (29) ಹಾಗೂ ಟಿಪ್ಪುನಗರದ ಮೊಸಿನ್ ಅಬ್ದುಲ್ ಶೂಖರ್ ಹೊನ್ನಾವರ್ (39) ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಿದ್ದಾರೆ.

ADVERTISEMENT

ಕೋರ್ಟ್ ತೀರ್ಪಿನನ್ವಯ, ಆರೂ ಆರೋಪಿಗಳಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟು ₹18 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೆ, ಗಾಯಾಳು ಅನೀಶ ತಹಶಿಲ್ದಾರ್ ಅವರಿಗೆ ಪ್ರತಿಯೊಬ್ಬ ಆರೋಪಿಯೂ ತಲಾ ₹10 ಸಾವಿರದಂತೆ ಒಟ್ಟು ₹60 ಸಾವಿರ ಪರಿಹಾರ ನೀಡಬೇಕು ಮತ್ತು ಕೊಲೆಯಾದ ಅಸ್ಲಂ ಸೈಯದ್‌ ಕುಟುಂಬದ ಅವಲಂಬಿತ ತಾಯಿಗೆ ₹50 ಸಾವಿರ ಪರಿಹಾರ ಧನ ನೀಡುವಂತೆ ಕೋರ್ಟ್ ಆದೇಶಿಸಿದೆ.

ಅಂದಿನ ತನಿಖಾಧಿಕಾರಿಗಳಾಗಿದ್ದ ಸಿಪಿಐ ಬಿ. ಗಿರೀಶ ಹಾಗೂ ಪಿಎಸ್‌ಐ ಶಶಿಕುಮಾರ ಸಿ.ಆರ್. ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಹೆಡ್ ಕಾನ್ಸ್‌ಟೇಬಲ್‌ಗಳಾದ ಬಿ.ಆರ್. ಹನುಮಂತ ಹಾಗೂ ರಮೇಶ ಮುಚ್ಚಂಡಿ ಅವರು ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಎಂ. ಮಳಗೀಕರ ವಾದ ಮಂಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.