ಮುಂಡಗೋಡ: ಸತತ ಮೂರನೇ ವರ್ಷ ಮಸಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ, ‘ನಮ್ಮ ಕನಸಿನ ಮುಂಡಗೋಡ’ ವೇದಿಕೆಯ ಸದಸ್ಯರು ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರೂ ಸಹ ಪಾಲ್ಗೊಂಡು, ಮೂರು ತಾಸಿನ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಯುವಕರು, ಮಹಿಳೆಯರು ಹಾಗೂ ಮಧ್ಯವಯಸ್ಕರು ಬೆಳಗಿನ ಜಾವ ಮಸಣದತ್ತ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಹುಬ್ಬಳ್ಳಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ‘ಮಸಣದಲ್ಲಿ ಮಹಾರಾತ್ರಿ’ ಆಚರಿಸಿದರು.
ಬೆಳಿಗ್ಗೆ 6.30ಕ್ಕೆ ರುದ್ರಭೂಮಿಯಲ್ಲಿ ಸೇರಿದ್ದ ಸಮಾನ ಮನಸ್ಕರು, ಬೆಳೆದುನಿಂತಿದ್ದ ಗಿಡಗಂಟಿಗಳನ್ನು ಕಟಾವು ಮಾಡಿದರು. ಸುತ್ತಲೂ ಬಿದ್ದಿದ್ದ ಮದ್ಯದ ಬಾಟಲಿಗಳನ್ನು ಆರಿಸಿದರು. ಅಕ್ಕಪಕ್ಕ ರಾಶಿಯಾಗಿ ಬಿದ್ದಿದ್ದ ಬಟ್ಟೆ, ಹೂವು, ಪಾತ್ರೆ ಇನ್ನಿತರ ತ್ಯಾಜ್ಯವನ್ನು ಗುಂಡಿಯಲ್ಲಿ ಹಾಕಿದರು.
‘ಮೂರು ವರ್ಷಗಳಿಂದ ಶಿವರಾತ್ರಿಯನ್ನು ವಿಭಿನ್ನವಾಗಿ ಆಚರಿಸುತ್ತ, ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ವೇದಿಕೆಯ ಸದಸ್ಯರಾದ ಸುಜೀತ ಸದಾನಂದ, ನಾರಾಯಣ ಉಪ್ಪುಂದ, ಸುನೀಲ ಬೈಲೂರು ಹೇಳಿದರು. ಶ್ರೀಧರ ಉಪ್ಪಾರ್, ಜಗದೀಶ ಕಾನಡೆ, ಸುನೀತಾ ನಾಯಕ, ಸುರೇಖಾ ಗಾಯತೊಂಡೆ, ರಮೇಶ ರಾವ್, ಸುಧೀಂದ್ರ ರಾವ್, ರಮೇಶ ದೈವಜ್ಞ, ಸದಾಶಿವ ಕೆದ್ಲಾಯಿ, ಯುವಬ್ರಿಗೆಡ್ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.