ADVERTISEMENT

ಶೂ ಭಾಗ್ಯಕ್ಕೆ ಅನುದಾನ ಅಪೂರ್ಣ: ಅರ್ಧ ಶೈಕ್ಷಣಿಕ ವರ್ಷ ಕಳೆದರೂ ವಿತರಣೆ ಇಲ್ಲ

ರಾಜೇಂದ್ರ ಹೆಗಡೆ
Published 31 ಅಕ್ಟೋಬರ್ 2025, 5:55 IST
Last Updated 31 ಅಕ್ಟೋಬರ್ 2025, 5:55 IST
ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದ ಶಾಲೆಯ ಮಕ್ಕಳು ಬರಿಗಾಲಲ್ಲಿ ಶಾಲೆಗೆ ತೆರಳಿದರು 
ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದ ಶಾಲೆಯ ಮಕ್ಕಳು ಬರಿಗಾಲಲ್ಲಿ ಶಾಲೆಗೆ ತೆರಳಿದರು    

ಶಿರಸಿ: ದಸರಾ ರಜೆ ಮುಗಿದು ವಾರ ಕಳೆದರೂ ಶಿರಸಿ ಶೈಕ್ಷಣಿಕ ಜಿಲ್ಲೆಯ ನೂರಾರು ಶಾಲೆಗಳಲ್ಲಿ ಮಕ್ಕಳಿಗೆ ಶೂ ವಿತರಣೆಯಾಗಿಲ್ಲ. ರಜೆ ಪೂರ್ವ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ, ಎಸ್‌ಡಿಎಂಸಿ ಖಾತೆಗೆ ಪೂರ್ಣ ಪ್ರಮಾಣದ ಅನುದಾನ ಬಂದಿಲ್ಲ. ಇದರಿಂದಾಗಿ ಶೂ ಖರೀದಿ ವಿಳಂಬವಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. 

ರಾಜ್ಯ ಸರ್ಕಾರವು ಈ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆ ಶೂ ಖರೀದಿ ಮಾಡಿ ಎಂದು ಸೂಚಿಸಿ ಹಣ ಬಿಡುಗಡೆ ಮಾಡಲು ಮುಂದಾಯಿತಾದರೂ ಶಾಲೆಗಳ ಎಸ್‍ಡಿಎಂಸಿ ಖಾತೆಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪೂರ್ಣಪ್ರಮಾಣದ ಹಣ ಹಾಕಿಲ್ಲ. ದಸರಾ ರಜೆ ಬಳಿಕ ಶಾಲೆಗಳ ಮುಖ್ಯ ಶಿಕ್ಷಕರು ಬ್ಯಾಂಕ್‍ಗೆ ತೆರಳಿ ಎಸ್‍ಡಿಎಂಸಿ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಪರೀಕ್ಷಿಸಿದರೆ ಹಲವು ಶಾಲಾಭಿವೃದ್ಧಿ ಸಮಿತಿ ಖಾತೆಗೆ ಪೂರ್ಣ ಪ್ರಮಾಣದ ಹಣ ಬಾರದಿರುವುದರ ಸಾಕ್ಷಿ ಪಾಸ್‍ಬುಕ್‍ನಲ್ಲಿ ಸ್ಪಷ್ಟವಾಗಿದೆ. ಕೆಲವು ಶಾಲೆಗಳಿಗೆ ಶೂ ಅನುದಾನ ಬಂದಿದೆ, ಕೆಲ ಕಡೆ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗುವುದು ಬಾಕಿಯಿದೆ. 

‘ರಜೆ ಪೂರ್ವ ಶಾಲಾ ಮುಖ್ಯ ಶಿಕ್ಷಕರು ಎಸ್‍ಡಿ‍ಎಂಸಿ ಸಭೆ ಕರೆದು, ಸಮಿತಿ ರಚನೆ ಮಾಡಿ ಬಳಿಕ ಶೂಗಳ ಗುಣಮಟ್ಟ ಪರೀಕ್ಷೆ ಮಾಡಿ ಮಕ್ಕಳ ಪಾದದ ಅಳತೆಗೆ ಅನುಗುಣವಾಗಿ ಶೂಗಳನ್ನು ಆರ್ಡರ್ ಮಾಡಲು ತೀರ್ಮಾನಿಸಿದ್ದರೂ ಈವರೆಗೆ ನಿಗದಿತ ಅನುದಾನ ಬರದಿದ್ದರಿಂದ ಸುಮ್ಮನಿರುವಂತಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಫೆಬ್ರವರಿವರೆಗೆ ವಾರ್ಷಿಕ ಪರೀಕ್ಷೆ ಬಂದೇ ಬಿಡುತ್ತದೆ’ ಎಂಬುದು ಶಿಕ್ಷಕರು ಮತ್ತು ಪೋಷಕರ ವಾದ.

ADVERTISEMENT

‘ಕೆಲವು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ1ರಿಂದ 8 ನೇ ತರಗತಿವರೆಗೂ ನಡೆಸಲು ಸರ್ಕಾರದ ಅನುಮತಿ ಇದೆ. ಕೆಲ ಕಡೆ 8, 9, 10ನೇ ತರಗತಿ ಪ್ರತ್ಯೇಕವಾಗಿವೆ. ಇನ್ನು ಪ್ರೌಢಶಾಲೆ ವಿಭಾಗದಲ್ಲಿ 8, 9, 10ನೇ ತರಗತಿಗಳು ಒಟ್ಟಾಗಿ ನಡೆಯುತ್ತಿರುವ ಕೆಲ ಶಾಲೆಗೆ ಅನುದಾನ ಬಂದಿದೆಯಾದರೂ, 8ನೇ ತರಗತಿ ಮಕ್ಕಳಿಗೆ ಶೂ ಹಣ ಹಾಕದೆ ಉಳಿಸಿಕೊಂಡಿರುವುದರಿಂದ ಪ್ರೌಢಶಾಲೆಗಳಿಗೆ ಶೂ ಖರೀದಿ ಒಟ್ಟಾಗಿ ಮಾಡಲು ಕಷ್ಟವಾಗುತ್ತಿದೆ’ ಎಂಬ ಮಾತು ವ್ಯಾಪಕವಾಗಿದೆ. 

ಕೆಲವು ಶಾಲೆಗಳಲ್ಲಿ ಈಗಾಗಲೇ ಶೂ ವಿತರಿಸಲಾಗಿದೆ. ಸದ್ಯ ಶಾಲೆಗಳು ಆರಂಭವಾಗಿರುವ ಕಾರಣ ಉಳಿದ ಶಾಲೆಗಳಲ್ಲೂ ವಿತರಣೆ ಇನ್ನಷ್ಟೇ ಆಗಬೇಕಿದೆ
ಡಿ.ಆರ್.ನಾಯ್ಕ ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ

ಎಸ್‍ಡಿಎಂಸಿ ಖಾತೆಗೆ ನೇರ ಹಣ 

ಶೂ ಭಾಗ್ಯ ಯೋಜನೆ ಆರಂಭವಾದಾಗಿನಿಂದ ಸರ್ಕಾರದ ಹಣ ಜಿಲ್ಲೆಯ ಉಪನಿರ್ದೇಶಕರ ಇಲಾಖೆಗೆ ಬಂದು ಬಳಿಕ ಆಯಾ ತಾಲ್ಲೂಕು ಬಿಇಒ ಕಚೇರಿ ಮೂಲಕ ಶಾಲೆಗಳಿಗೆ ಹಂಚಿಕೆಯಾಗುತ್ತಿತ್ತು. ಆದರೆ ಈ ವರ್ಷ ನಿಯಮ  ಬದಲಿಸಿ ನೇರವಾಗಿ ಶಾಲೆಗಳ ಎಸ್‍ಡಿಎಂಸಿ ಖಾತೆಗೆ ಹಣ ಹಾಕಲು ಮುಂದಾಗಿರುವುದರಿಂದ ಸಾಕಷ್ಟು ಎಡವಟ್ಟುಗಳಾಗಿ ಶಾಲೆಗಳಿಗೆ ಹಣ ಬಂದಿಲ್ಲ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.