ಶಿರಸಿ:ಅ.19 ರಂದು ತಾಲ್ಲೂಕಿನ ಬನವಾಸಿ ಸಮೀಪದ ಅಂಡಗಿ ಗ್ರಾಮದಲ್ಲಿ ಉದ್ಯಮಿಯೊಬ್ಬರನ್ನು ಬೆದರಿಸಿ ₹50 ಲಕ್ಷ ದೋಚಿದ್ದ ಪ್ರಕರಣ ಸಂಬಂಧ,ಶಿರಸಿ ವೃತ್ತದ ಪೊಲೀಸ್ ತಂಡ 9 ಮಂದಿಯನ್ನು ಬಂಧಿಸಿದೆ.
ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀಧರ ನಗರದ ಆಸಿಫ್ ಅಬ್ದುಲ್ ಸತ್ತಾರ (29), ಅಬ್ದುಲ್ ಅಬ್ದುಲ್ ಸತ್ತಾರ (32), ಮನ್ಸೂರ್ ಅಲಿಯಾಸ್ ಮಹಮದ್ ಜಾಫರ್ ಖಾನ್ (31), ಸಿದ್ದಾಪುರ ತಾಲ್ಲೂಕು ನೆಜ್ಜೂರಿನ ಅಜಿಮುಲ್ಲಾ ಅನ್ಸರ್ ಸಾಬ್ (29), ಭಟ್ಕಳ ಬದ್ರಿಯಾ ಕಾಲೊನಿಯ ಅಬ್ದುಲ್ ರೆಹಮಾನ್ ವಟರಾಗ (30), ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಮೇಲಿನ ಪೇಟೆಯ ರಿಯಾಜ್ ಫಯಾಜ್ (32), ಕೊಪ್ಪ ತಾಲ್ಲೂಕು ನೇತಾಜಿ ನಗರದವರಾದ ವಿಶ್ವನಾಥ ವಾಸು ಶೆಟ್ಟಿ (41), ಮನೋಹರ ಆನಂದ ಶೆಟ್ಟಿ (36), ಶಿವಮೊಗ್ಗ ಜಿಲ್ಲೆ ತೀರ್ಥಳ್ಳಿ ತಾಲ್ಲೂಕಿನ ಬಾಳೆಬೈಲ್'ನ ಇಕ್ಬಾಲ್ ಅಬ್ದುಲ್ ಕೆ. (40) ಬಂಧಿಸಲಾಗಿದೆ.
ಸಿದ್ದಾಪುರ ತಾಲ್ಲೂಕು ನೆಜ್ಜೂರು ಗ್ರಾಮದ ಜಾವೇದ್ ಖಾನ್ ಎಂಬುವವರು ಇಬ್ಬರು ಸಂಬಂಧಿಕರೊಂದಿಗೆ ಬೆಳಗಾವಿಯಿಂದ ವಾಪಸ್ಸಾಗುವ ವೇಳೆ ದರೋಡೆಕೋರರು ಅಡ್ಡಗಟ್ಟಿ ಹಣ ದೋಚಿದ್ದರು.
'ಬಂಧಿತರಿಂದ ₹13.82 ಲಕ್ಷ, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಕಾರು, 12 ಮೊಬೈಲ್ ಮತ್ತು ಜಿ.ಪಿ.ಎಸ್. ಟ್ರ್ಯಾಕರ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು ಅವರ ಹುಡುಕಾಟ ನಡೆಸಲಾಗುತ್ತಿದೆ' ಎಂದು ಡಿಎಸ್ಪಿ ರವಿ ನಾಯ್ಕ ತಿಳಿಸಿದ್ದಾರೆ.
ಟ್ರ್ಯಾಕರ್ ಬಳಸಿ ಬೆನ್ನು ಬಿದ್ದಿದ್ದರು
'ಉದ್ಯಮಿ ಜಾವೇದ್ ಹಣಕಾಸು ವ್ಯವಹಾರ ಅರಿತಿದ್ದ ಆಸಿಫ್, ಆಗಾಗ ಉದ್ಯಮಿಯ ಮನೆಗೆ ಭೇಟಿ ನೀಡುತ್ತಿದ್ದ. ಭೂಮಿ ಖರೀದಿಗೆ ಬೆಳಗಾವಿಗೆ ತೆರಳುವುದನ್ನು ಅರಿತಿದ್ದರಿಂದ ವಾಹನಕ್ಕೆ ಜಿ.ಪಿ.ಎಸ್. ಟ್ರ್ಯಾಕರ್ ಅಳವಡಿಸಿದ್ದ. ನಿರಂತರವಾಗಿ ಟ್ರ್ಯಾಕರ್ ಮೂಲಕ ಚಲನವಲನ ಗಮನಿಸುತ್ತಿದ್ದ ಈತ ಸಹಚರರ ಜತೆ ಸೇರಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಿದ್ದ' ಎಂದು ತನಿಖೆಯ ನೇತೃತ್ವ ವಹಿಸಿದ್ದ ಡಿಎಸ್ಪಿ ರವಿ ನಾಯ್ಕ ವಿವರಿಸಿದರು.
ಸಿಪಿಐ ರಾಮಚಂದ್ರ ನಾಯಕ, ಎಸ್ಐಗಳಾದ ಹನುಮಂತ ಬಿರಾದಾರ, ಭೀಮಾಶಂಕರ ಸಿನ್ನೂರು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.