
ಶಿರಸಿ: ಕ್ಯಾನ್ಸರ್ ಪೀಡಿತ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸೈಕಲ್ ಚಲಾಯಿಸುವ ಮೂಲಕ ಹಣ ಸಂಗ್ರಹಿಸುವ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿನೂತನ ಅಭಿಯಾನಕ್ಕೆ ಶಿರಸಿ ಸೈಕ್ಲಿಂಗ್ ಕ್ಲಬ್ ಚಾಲನೆ ನೀಡಿದೆ.
ಮಾರಿಕಾಂಬಾ ಜಾತ್ರೆಯ ಸಂದರ್ಭವನ್ನು ಬಳಸಿಕೊಂಡ ಕ್ಲಬ್ನ ಸದಸ್ಯರು, ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಜಾತ್ರಾ ಚಪ್ಪರದ ಎದುರು ಸೈಕಲ್ ರೈಡ್ ಮಾಡುವ ಮೂಲಕ ಗಮನ ಸೆಳೆದರು.
ಮುಂಬೈ ಮೂಲದ ಕ್ಯಾನ್ಕಿಡ್ಸ್ ಸಂಸ್ಥೆಯು ಪ್ರತಿವರ್ಷ ಫೆ.4ರ ವಿಶ್ವ ಕ್ಯಾನ್ಸರ್ ದಿನದಿಂದ 40 ದಿನಗಳ ಕಾಲ ಈ ಸೈಕಲ್ ರ್ಯಾಲಿ ಆಯೋಜಿಸುತ್ತದೆ. ಈ ಅಭಿಯಾನದ ಅಡಿಯಲ್ಲಿ ನೋಂದಾಯಿಸಿಕೊಂಡ ಸವಾರರು ಚಲಾಯಿಸುವ ಪ್ರತಿ ಕಿಲೋಮೀಟರ್ಗೆ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಸುಮಾರು ₹50 ಅನುದಾನ ಸಂಸ್ಥೆಗೆ ಸಂದಾಯವಾಗುತ್ತದೆ. ಈ ಹಣವನ್ನು ದೇಶದ 22 ರಾಜ್ಯಗಳಲ್ಲಿರುವ 60 ಕೇಂದ್ರಗಳ ಮೂಲಕ ಸುಮಾರು 1.5 ಲಕ್ಷಕ್ಕೂ ಅಧಿಕ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆ ಮತ್ತು ಆರೈಕೆಗೆ ಬಳಸಲಾಗುತ್ತದೆ.
ಅಭಿಯಾನದ ಕುರಿತು ಮಾಹಿತಿ ನೀಡಿದ ಶಿರಸಿ ಸೈಕ್ಲಿಂಗ್ ಕ್ಲಬ್ನ ಮುಖ್ಯಸ್ಥ ಡಾ. ದಿನೇಶ ಹೆಗಡೆ, ‘ನಮ್ಮ ಕ್ಲಬ್ನ ಸದಸ್ಯರು ಪ್ರತಿದಿನ ನಿಯಮಿತವಾಗಿ ಸೈಕ್ಲಿಂಗ್ ಮಾಡುತ್ತಿದ್ದು, ಈ 40 ದಿನಗಳಲ್ಲಿ ಒಟ್ಟಾರೆಯಾಗಿ ಕನಿಷ್ಠ 10,000 ಕಿ.ಮೀ ಸಂಚರಿಸುವ ಗುರಿ ಹೊಂದಿದ್ದೇವೆ. ಈ ಮೂಲಕ ಕ್ಯಾನ್ಕಿಡ್ಸ್ ಸಂಸ್ಥೆಗೆ ಕನಿಷ್ಠ ₹5 ಲಕ್ಷ ಹಣ ಸಂಗ್ರಹಿಸುವ ಉದ್ದೇಶವಿದೆ. ಇದು ಕೇವಲ ಮಕ್ಕಳ ಚಿಕಿತ್ಸೆಗೆ ನೆರವಾಗುವುದಲ್ಲದೆ, ಸವಾರರ ಆರೋಗ್ಯ ವರ್ಧನೆಗೂ ಪೂರಕವಾಗಿದೆ’ ಎಂದು ತಿಳಿಸಿದರು.
ಜಾತ್ರಾ ಗದ್ದುಗೆಯ ಎದುರು ನಡೆದ ಈ ಜನಜಾಗೃತಿ ಜಾಥಾದಲ್ಲಿ 14ಕ್ಕೂ ಹೆಚ್ಚು ಸೈಕಲ್ ಸವಾರರು ಪಾಲ್ಗೊಂಡಿದ್ದರು. ಕ್ಲಬ್ನ ಸದಸ್ಯರಾದ ಡಾ.ವಿನಾಯಕ ಸುಬ್ರಹ್ಮಣ್ಯ, ನಾಗರಾಜ ಭಟ್ ಅಜಂತಾ, ಎಸ್.ಆರ್. ನಾಗರಾಜ ಭಟ್, ನರಸಿಂಹ ಜೋಶಿ, ದೀಪಕ ಕಾಮತ, ವಿನಾಯಕ ಪ್ರಭು, ರವೀಂದ್ರ ಹೆಗಡೆ, ವಿನಯ ಹೆಗಡೆ, ಗಜಾನನ ನಾಯಕ ಹಾಗೂ ಗೌರವ ಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದು ಅಭಿಯಾನಕ್ಕೆ ಸಾಥ್ ನೀಡಿದರು.
ಈ ಕಾರ್ಯದಲ್ಲಿ ಯಾರೂ ಬೇಕಾದರೂ ₹699 ನೀಡಿ ನೋಂದಾಯಿಸಿಕೊಳ್ಳುವ ಮೂಲಕ ಭಾಗವಹಿಸಬಹುದಾಗಿದೆ.ಡಾ.ದಿನೇಶ ಹೆಗಡೆ ಸೈಕ್ಲಿಂಗ್ ಕ್ಲಬ್ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.