ಶಿರಸಿ: ಸಿದ್ದಾಪುರ ತಾಲ್ಲೂಕು ಹಾಗೂ ಬನವಾಸಿ ಒಳಗೊಂಡು ಸಾಗರ ಜಿಲ್ಲೆ ರಚನೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಯಶಸ್ವಿಯಾಗುವುದಿಲ್ಲ. ಆದರೂ ಪ್ರಯತ್ನ ಮುಂದುವರೆದರೆ ಪಕ್ಷಾತೀತ ಹೋರಾಟ ನಡೆಸುತ್ತೇವೆ ಎಂದು ಕದಂಬ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 30 ವರ್ಷಗಳಿಂದ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಒಳಗೊಂಡು ಶಿರಸಿ ಜಿಲ್ಲೆಯಾಗಬೇಕೆಂಬ ಹೋರಾಟ ನಡೆಯುತ್ತಿದೆ. ಈ ಹೋರಾಟ ಕೆಡಿಸಬೇಕೆಂದು ಕೆಲವರು ಸಿದ್ದಾಪುರ ಹಾಗೂ ಬನವಾಸಿ ಸೇರಿಸಿಕೊಂಡು ಸಾಗರ ಜಿಲ್ಲೆಯನ್ನಾಗಿ ಮಾಡಲು ಹೊರಟಿದ್ದಾರೆ. ಸಾಗರ ಶಾಸಕ ಗೋಪಾಲಕೃಷ್ಣ ನೇತೃತ್ವದಲ್ಲಿ ಸಿದ್ದಾಪುರ ದಲ್ಲಿ ಸಭೆಯೂ ನಡೆಯುತ್ತಿದೆ. ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಕೂಗು ತೀವ್ರವಾಗಿ, ಪಕ್ಷಾತೀಯ ಹೋರಾಟ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತವಾಗಬೇಕು’ ಎಂದು ತಿಳಿಸಿದರು.
‘ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನ ದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ಭೇಟಿಯಾಗಿ ಶಿರಸಿ ಪ್ರತ್ಯೇಕ ಜಿಲ್ಲೆಯಾಗಲು ಕೈಜೋಡಿಸಬೇಕು ಎಂದು ವಿನಂತಿಸಿದಾಗ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಸಂಸದ ವಿಶ್ವೇಶ್ವರ ಹೆಗಡ ಕಾಗೇರಿ ಅವರನ್ನು ಭೇಟಿಯಾಗಿ ವಿನಂತಿಸಿದಾಗ ಅವರೂ ಹೋರಾಟಕ್ಕೆ ಬೆಂಬಲ ನೀಡಿದ್ದರು. ಕೆಲ ದಿನಗಳಿಂದ ಸಿದ್ದಾಪುರ ಹಾಗೂ ಬನವಾಸಿ ಭಾಗವನ್ನು ಸಾಗರಕ್ಕೆ ಸೇರ್ಪಡಿಸಿ, ಜಿಲ್ಲೆ ಮಾಡಲು ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು’ ಎಂದರು.
ಕಾರ್ಯದರ್ಶಿ ಎಂ.ಎಂ.ಭಟ್ ಕಾರೇಕೊಪ್ಪ ಮಾತನಾಡಿ, ‘ಯಾವ ಕಾರಣಕ್ಕೂ ಸಿದ್ದಾಪುರವನ್ನು ನಮ್ಮ ಜಿಲ್ಲೆಯಿಂದ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬುದಾಗಿ ನಮ್ಮ ಶಾಸಕರು ತಿಳಿಸಿದ್ದಾರೆ. ಶಿರಸಿ ಪ್ರತ್ಯೇಕ ಜಿಲ್ಲೆಗೆ ಸಾಗರದವರು ಸಹಕಾರ ನೀಡಬೇಕು’ ಎಂದರು.
ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಪ್ರಮುಖರಾದ ಧುರೀಣ ರಮೇಶ ದುಭಾಶಿ ಇದ್ದರು.
ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಸಹಜ. ಆದರೆ ಜಿಲ್ಲೆಯ ಅಸ್ಮಿತೆ ಪ್ರಶ್ನೆ ಬಂದಾಗ, ಪಕ್ಷಭೇದ ಬದಿಗಿಟ್ಟು ನಾವೆಲ್ಲರೂ ಒಂದಾಗಿ ಹೋರಾಟ ಮಾಡುತ್ತೇವೆಅನಂತಮೂರ್ತಿ ಹೆಗಡೆ, ಕದಂಬ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.