ಶಿರಸಿ: ತಾಲ್ಲೂಕಿನ ಕಡಬಾಳದ ಕದಂಬೇಶ್ವರ ದೇವರ ಅಷ್ಟಬಂಧ ಮಹೋತ್ಸವ ಹಾಗೂ ನೂತನ ದೇವಾಲಯ ಸಮರ್ಪಣೆ ಕಾರ್ಯಕ್ರಮ ಅದ್ಧೂರಿ ತೆರೆ ಕಂಡಿತು.
ನಾಲ್ಕು ದಿನಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ದೇವರ ದರ್ಶನ ಪಡೆದರು. ಕಾರ್ಯಕ್ರಮಗಳು ಮಂಜುಗುಣಿಯ ಶ್ರೀನಿವಾಸ ಭಟ್ ಮಾರ್ಗದರ್ಶನದಲ್ಲಿ ಕೊಳಗಿಬೀಸ್ ಕುಮಾರ ಭಟ್ ಇವರ ಅದ್ವೈರ್ಯದಲ್ಲಿ ನೆರವೇರಿತು.
ದೇಶದಲ್ಲಿ ಯುದ್ಧ ಭೀತಿ ಉಂಟಾದ ಪರಿಣಾಮ, ಲಕ್ಷಾಂತರ ಯೋಧರು ಹಗಲಿರುಳೆನ್ನದೆ ಗಡಿಯ ಭದ್ರತೆಯಲ್ಲಿ ತೊಡಗಿದ್ದಾರೆ. ಆ ಎಲ್ಲ ಯೋಧರಿಗೆ ಕದಂಬೇಶ್ವರ ಶಕ್ತಿ ನೀಡಲೆಂದು 3 ಸಾವಿರ ಅತ್ತಿ ಸಮಿಧೆದೊಂದಿಗೆ ಶಿವಧಾರಿತ ತ್ರಿಶೂಲ ಹೋಮ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಶ್ರೀನಿವಾಸ ಭಟ್ ಮಂಜುಗುಣಿ, ‘ಪ್ರಕೃತಿಯಲ್ಲಿರುವ ದೈವಿಶಕ್ತಿಯ ಫಲವನ್ನು ಪಡೆಯಬೇಕೆಂದರೆ ಜನಸಾಮಾನ್ಯರ ಶ್ರಮ ಅಗತ್ಯವಾಗಿ ಬೇಕು. ಪೃಕೃತಿಯನ್ನು ತಿಳಿಹೇಳುವ ಮಾರ್ಗದಲ್ಲಿ ಶಿವಲಿಂಗವನ್ನು ಪ್ರಾಚೀನರು ಪ್ರತಿಷ್ಟಾಪನೆ ಮಾಡಿದರು. ಕೇವಲ ದೇಗುಲ ಮಾತ್ರವಲ್ಲ ವರ್ತವಾನದ ಜನಾಂಗವೇ ಇಲ್ಲಿ ಜೀರ್ಣೊದ್ಧಾರವಾಗಿದೆ. ಶಾಸ್ತ್ರದ ಅನುಸರಣೆಯಿಂದ ಸಕಲ ಜೀವರಾಶಿಗೆ ಒಳಿತಾಗುತ್ತದೆ’ ಎಂದರು.
ಶಾಸಕ ಭೀಮಣ್ಣ ನಾಯ್ಕ ಕದಂಬೇಶ್ವರ ದೇಗುಲಕ್ಕೆ ಭೇಟಿ ನೀಡಿ ಕದಂಬರ ಇತಿಹಾಸದ ವೈಭವದ ಸಾಕ್ಷ್ಯಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ ಎಸ್.ಕೆ ಭಾಗವತ್, ಜಗದೀಶ ಗೌಡ ಇನ್ನಿತರರು ಉಪಸ್ಥಿತರಿದ್ದರು.
ಬಿಜೆಪಿ ರೈತಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಭೇಟಿ ನೀಡಿ, ದೇಗುಲ ನಿರ್ಮಾಣ ಕಾರ್ಯದ ವೇಳೆ ಸ್ಥಳದಾನ ಮಾಡಿದ ಗ್ರಾಮಸ್ಥರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.