
ಶಿರಸಿ: ಪಾರಂಪರಿಕ ಸೊಗಡಿನ ಮಾರಿಕಾಂಬಾ ದೇವಿಯ ಮಹಾಜಾತ್ರೆ 5ನೇ ದಿನಕ್ಕೆ ಕಾಲಿಟ್ಟಿದ್ದು, ರಜೆಯ ಹಿನ್ನೆಲೆಯಲ್ಲಿ ಬಿಡ್ಕಿಬೈಲಿನ ಜಾತ್ರಾ ಗದ್ದುಗೆಯತ್ತ ಲಕ್ಷಾಂತರ ಭಕ್ತರು ಧಾವಿಸಿದ್ದಾರೆ. ಶುಕ್ರವಾರ ಸಂಜೆಯಿಂದಲೇ ಆರಂಭವಾದ ಭಕ್ತರ ದಂಡು ಶನಿವಾರ ರಾತ್ರಿಯ ವೇಳೆಗೆ ಸುಮಾರು 2 ಲಕ್ಷದ ಗಡಿ ದಾಟಿದ್ದು, ಶಿರಸಿ ನಗರ ಅಕ್ಷರಶಃ ಜನಸಾಗರವಾಗಿ ಮಾರ್ಪಟ್ಟಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ವಿಶೇಷ ಬಸ್ಗಳ ಮೂಲಕ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಿದ್ದು, ನಸುಕಿನ ಜಾವ 5 ಗಂಟೆಯಿಂದಲೇ ದೇವಿಯ ದರ್ಶನಕ್ಕಾಗಿ ಕಿಲೋ ಮೀಟರ್ಗಟ್ಟಲೆ ಉದ್ದದ ಸರತಿ ಸಾಲು ಕಂಡುಬಂದಿತು.
ಬಿಸಿಲನ್ನೂ ಲೆಕ್ಕಿಸದೇ ಭಕ್ತರು ದೇವಿಯ ದರ್ಶನಕ್ಕೆ ಕಾದು ನಿಂತಿದ್ದರು. ಜನದಟ್ಟಣೆ ನಿಯಂತ್ರಿಸಲು ಪೊಲೀಸರು, ಹೋಂ ಗಾರ್ಡ್ಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಹರಸಾಹಸ ಪಟ್ಟರು. ವಾಹನ ದಟ್ಟಣೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಿದ್ದು, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
‘ಹೊರ ಊರುಗಳಲ್ಲಿ ಉದ್ಯೋಗದಲ್ಲಿರುವ ಶಿರಸಿ ಸುತ್ತಮುತ್ತಲಿನ ಹಳ್ಳಿಗಳ ಯುವಜನರು, ಎರಡು ದಿನಗಳ ರಜೆ ಕಳೆಯಲು ಊರಿಗೆ ಬಂದಿದ್ದಾರೆ. ಬೆಂಗಳೂರಿನಿಂದ ಶಿರಸಿಗೆ ವಿಶೇಷ ಬಸ್ಗಳು ಬರುತ್ತಿವೆ. ಭಾನುವಾರ ಜಾತ್ರೆ ಪೇಟೆಯಲ್ಲಿ ಜನಸಂದಣಿ ಹೆಚ್ಚುವ ಸಾಧ್ಯತೆಯಿದೆ’ ಎನ್ನುತ್ತಾರೆ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ.
ದೇವಿಯ ಮಹಿಮೆಗೆ ಸಾಕ್ಷಿಯಾಗಿ ಕಳೆದ ಐದು ದಿನಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಉಡಿ ಸಮರ್ಪಣೆಯಾಗಿದೆ. 2 ಲಕ್ಷಕ್ಕೂ ಹೆಚ್ಚು ಲಡ್ಡು ಪ್ರಸಾದ ವಿತರಣೆಯಾಗಿದ್ದು, ತುಲಾಭಾರ ಸೇವೆ ಹಾಗೂ ಕುರಿ-ಕೋಳಿ ಭಂಡಾರ ಅರ್ಪಿಸುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ದೇವಸ್ಥಾನದ ಸಿಬ್ಬಂದಿ ಹಾಗೂ ಬಾಬುದಾರರು ವ್ಯವಸ್ಥಿತ ದರ್ಶನಕ್ಕೆ ಸತತ ಶ್ರಮಿಸುತ್ತಿದ್ದಾರೆ.
ಜಾತ್ರಾ ಪೇಟೆಯ ರಂಗು ಇಮ್ಮಡಿ
ಸಂಜೆಯಾಗುತ್ತಿದ್ದಂತೆ ಜಾತ್ರಾ ಪೇಟೆಯ ರಂಗು ಇಮ್ಮಡಿಯಾಗುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿರುವ ಪೇಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ದೇಶದ ನಾನಾ ಭಾಗಗಳಿಂದ ಬಂದಿರುವ ವ್ಯಾಪಾರಿಗಳ ಮಳಿಗೆಗಳಲ್ಲಿ ಆಟಿಕೆ ಬಟ್ಟೆ ಹಾಗೂ ತಿಂಡಿ-ತಿನಿಸುಗಳ ಮಾರಾಟ ಚುರುಕುಗೊಂಡಿದೆ. ಕೋಣನಬಿಡಕಿ ಮತ್ತು ಕೋಟೆಕೆರೆಯ ಆವರಣದಲ್ಲಿರುವ ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಸಾಹಸ ಕ್ರೀಡೆಗಳು ಯುವಜನತೆ ಮತ್ತು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ಎರಡು ದಿನಗಳ ರಜೆ ಕಳೆಯಲು ಊರಿಗೆ ಬಂದಿರುವ ಉದ್ಯೋಗಸ್ಥರು ಹಾಗೂ ಪ್ರವಾಸಿಗರಿಂದಾಗಿ ಶಿರಸಿ ಜಾತ್ರೆಗೆ ಅಭೂತಪೂರ್ವ ಜೀವಕಳೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.